ಉಡುಪಿ: ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನ ಮೇಲೆ ಗುಂಪಾಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಉಡುಪಿಯ ನಿಟ್ಟೂರು ಅಡ್ಕದಕಟ್ಟೆ ಬಳಿ ನಡೆದಿದೆ.
ಕೊರಂಗ್ರಪಾಡಿ ಗ್ರಾಮದ ಈಶಾನ್ ಶೆಟ್ಟಿ (19) ಅವರು ಮಾರ್ಚ್ 28 ರಂದು ನಿಟ್ಟೂರಿನ ಅಡ್ಕದಕಟ್ಟೆ ಬಳಿ ನಡೆಯುತ್ತಿದ್ದ ದೈವಸ್ಥಾನದ ಕೋಲ ನೋಡಲು ಮೋಟಾರ್ಸೈಕಲ್ನಲ್ಲಿ ರಾತ್ರಿ ಸುಮಾರು 11 ಗಂಟೆಗೆ ಹೋಗಿದ್ದರು.
ಕೋಲ ನೋಡಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ದೈವಸ್ಥಾನದಿಂದ ಸ್ವಲ್ಪ ಮುಂದೆ ಬಂದಾಗ ಬೂದು ಬಣ್ಣದ ಬೊಲೆರೋ ಕಾರಿನಲ್ಲಿ ಬಂದ ಐವರು ಯುವಕರು ಕಾರು ನಿಲ್ಲಿಸಿದ್ದಾರೆ. ಈ ವೇಳೆ ಪರಿಚಿತನಾದ ಚರಣ್ ಕಾರಿನಿಂದ ಇಳಿದು ಈಶಾನ್ ಶೆಟ್ಟಿಯವರ ಬೈಕ್ನ್ನು ಅಡ್ಡಗಟ್ಟಿ ಮಾತನಾಡಲು ಇದೆ ಎಂದು ಹೇಳಿ ಅವರ ಬೈಕ್ನಲ್ಲೇ ಹಿಂದೆ ಕುಳಿತುಕೊಂಡು ಸಮೀಪದ ಗ್ರೌಂಡ್ ಕಡೆಗೆ ಹೋಗಿದ್ದಾನೆ.
ಅಲ್ಲಿ ಚರಣ್ “ನಿನ್ನ ತಮ್ಮ ನನಗೆ ಹಣ ಕೊಡಬೇಕಿದೆ, ಅದನ್ನು ನೀನೇ ಕೊಡಬೇಕು” ಎಂದು ಬೆದರಿಕೆ ಹಾಕಿ, ಹಣ ಕೊಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿದ್ದಾನೆ. ಈ ವೇಳೆ ಚರಣ್ ಜೊತೆ ಬಂದಿದ್ದ ಇತರ ನಾಲ್ವರು ಆರೋಪಿಗಳು ಸೇರಿ ಈಶಾನ್ ಶೆಟ್ಟಿಯವರ ಮುಖ, ತಲೆ, ಎದೆ ಮತ್ತು ಬೆನ್ನಿಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ. ಅವರಲ್ಲಿ ಒಬ್ಬನು ಡ್ರ್ಯಾಗರ್ನ ಹ್ಯಾಂಡಲ್ನಿಂದ ಮುಖ ಹಾಗೂ ತಲೆಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯ ನಂತರ ಆರೋಪಿಗಳು ಈಶಾನ್ ಶೆಟ್ಟಿಯವರ ಮೊಬೈಲ್ ಫೋನ್, ಮೋಟಾರ್ಸೈಕಲ್ ಮತ್ತು ಹೆಲ್ಮೆಟ್ನ್ನು ತಮ್ಮ ವಶಕ್ಕೆ ತೆಗೆದುಕೊಂಡು, “ಹಣ ತಂದು ಕೊಟ್ಟ ಬಳಿಕವೇ ತೆಗೆದುಕೊಂಡು ಹೋಗು” ಎಂದು ಹೇಳಿ ಜೀವ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾರೆ.
ಡ್ರ್ಯಾಗರ್ನಿಂದ ಹಲ್ಲೆ ನಡೆಸಿದಾತನನ್ನು ಚಿತ್ತರಂಜನ್ ಎಂದು ಗುರುತಿಸಲಾಗಿದ್ದು, ಇತರ ಆರೋಪಿಗಳನ್ನು ಧ್ಯಾನ್, ಪ್ರಭು ಮತ್ತು ಯೋಗೀಶ ಎಂದು ತಿಳಿದುಬಂದಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ





