ವಿಟ್ಲ: ಕುದ್ದುಪದವು ಪೆರುವಾಯಿ ರಸ್ತೆಯ ಮುಳಿಯ ದಂಬೆ ಅಂಗನವಾಡಿ ಕೇಂದ್ರದ ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಟಿಪ್ಪರ್ ನಡುವೆ ಅಪಘಾತ ನಡೆದು, ಎರಡು ಕಡೆಯವರ ಮಾತಿನ ಚಕಮಕಿ ನಡೆದು, ದೂರು ಪ್ರತಿದೂರು ದಾಖಲಾಗಿದೆ.
ಪಕಳಕುಂಜದಿಂದ ವಿಟ್ಲಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮತ್ತು ಪೆರುವಾಯಿ ಕಡೆ ಹೋಗುತ್ತಿದ್ದ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಇಳಿಜಾರು ಪ್ರದೇಶ ಹಾಗೂ ತಿರುವಿನಲ್ಲಿ ಎರಡು ವಾಹನಗಳು ಒಟ್ಟಿಗೆ ಮುನ್ನುಗಿದ ಕಾರಣ ಅಪಘಾತವಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ಬಸ್ ಚಾಲಕ ಮತ್ತು ಟಿಪ್ಪರ್ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದ್ದು, ಆ ಬಳಿಕ ಟಿಪ್ಪರ್ ಚಾಲಕ, ಬಸ್ ಚಾಲಕ ಮತ್ತು ನಿರ್ವಾಹಕರ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ.
ಎರಡೂ ಕಡೆಯವರು ಆಸ್ಪತ್ರೆಗೆ ದಾಖಲಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.





