ಉಡುಪಿ: ದುರ್ಗಮ ಹಾದಿಯಲ್ಲಿ ತಮ್ಮ 25 ವರ್ಷ ಹಳೆಯ ಹೀರೋ ಹೊಂಡಾ ಸ್ಟೆಂಡರ್ ಬೈಕ್ನಲ್ಲಿ ಸಂಚರಿಸಿ ಸುಮಾರು 17,982 ಎತ್ತರವಿರುವ ವಿಶ್ವದ 2ನೇ ಅತೀ ಎತ್ತರದ ಪ್ರದೇಶವಾದ ಜಮ್ಮು ಕಾಶ್ಮೀರದ ಖರ್ದುಂಗ್ಲಾದಲ್ಲಿ ಕನ್ನಡ ಬಾವುಟ ಹಾರಿಸಿ ಕನ್ನಡಾಭಿಮಾನ ಮೆರೆದಿದ್ದ ಶಿರ್ವದ ರಾಜೇಂದ್ರ ಶೆಣೈ ಮತ್ತು ಮಗ ಪ್ರಜ್ವಲ್ ಶೆಣೈ ಅವರ ಸಾಹಸವನ್ನು ಗುರುತಿಸಿದ ಹೀರೋ ಮೋಟೋ ಕಾರ್ಪ್ ಸಂಸ್ಥೆ ಹೀರೋ ಸೆಂಟೆನ್ನಿಯಲ್ ಬೈಕ್ ನೀಡಿ ಗೌರವಿಸಲಿದೆ.
ಪ್ರಜ್ವಲ್ ಶೆಣೈ ತಮ್ಮ 25 ವರ್ಷ ಹಳೆಯ ಹೀರೋ ಹೊಂಡಾ ಸ್ಟೆಂಡರ್ ಬೈಕ್ ಮೂಲಕ ದೇಶದ 17 ರಾಜ್ಯಗಳಲ್ಲಿ ಏಕಾಂಗಿಯಾಗಿ, ಕೆಲವೊಮ್ಮೆ ತನ್ನ ತಂದೆ ರಾಜೇಂದ್ರ ಶೆಣೈ ಅವರೊಂದಿಗೆ ಪ್ರಯಾಣಿಸಿ 5 ವರ್ಷಗಳಲ್ಲಿ ಸುಮಾರು 45,000 ದಿಂದ 50,000 ಕಿ.ಮೀ. ಕ್ರಮಿಸಿದ್ದಾರೆ. ತನ್ನ 19ನೇ ವಯಸ್ಸಿನಲ್ಲಿ ಬೈಕ್ ಮೂಲಕ ಬೆಂಗಳೂರಿಗೆ ಮೊದಲ ಬಾರಿಗೆ ಪ್ರಯಾಣ ಬೆಳೆಸಿದ್ದ ಆತ ತಿರುಪತಿ, ಮಧುರೈ, ಕನ್ಯಾಕುಮಾರಿ, ಗೋವಾದ ಮಾರ್ದೋಳ್ ದೇಗುಲ, ಪುರಿಯ ಜಗನ್ನಾಥ ದೇವಾಲಯ, ಶಿರಡಿ, ನಾಸಿಕ್ ಪಂಡರಾಪುರ, ಅಯೋಧ್ಯೆಯ ಶ್ರೀ ರಾಮ ಮಂದಿರ ಮೊದಲಾದ ದೇಗುಲಗಳಿಗೆ ಭೇಟಿ ನೀಡಿದ್ದರು.
ಶಿರ್ವದ ಅಪ್ಪ-ಮಗ 2024ರ ಜೂನ್ ತಿಂಗಳಲ್ಲಿ ಬೈಕ್ ಮೂಲಕ 10 ದಿನಗಳ ಅವಧಿಯಲ್ಲಿ ಸುಮಾರು 2,100 ಕಿ.ಮೀ. ಪ್ರಯಾಣ ಬೆಳೆಸಿ ಖರ್ದುಂಗ್ಲಾ ತಲುಪಿ ಕನ್ನಡ ಬಾವುಟ ಹಾರಿಸಿ ಭಾಷಾಭಿಮಾನ ಮೆರೆದಿದ್ದರು.
2025ರ ಫೆಬ್ರವರಿ ತಿಂಗಳಲ್ಲಿ 9 ದಿನಗಳ ಅವಧಿಯಲ್ಲಿ ಸುಮಾರು 4 ಸಾವಿರ ಕಿ.ಮೀ. ಕ್ರಮಿಸಿ ಪ್ರಯಾಗ್ರಾಜ್ ತಲುಪಿ ಮಹಾಕುಂಭ ಮೇಳದಲ್ಲಿ ಪವಿತ್ರ ಸ್ಥಾನ ಮಾಡಿ ಹಿಂತಿರುಗಿದ್ದರು. ಹೀರೋ ಸಂಸ್ಥೆಯ 25 ವರ್ಷಹಳೆಯ ಬೈಕ್ನಲ್ಲಿ ದೇಶಾದ್ಯಂತ ಸಂಚರಿಸಿ ವಿಕ್ರಮ ಸಾಧಿಸಿದ್ದ ಪ್ರಜ್ವಲ್ ಶೆಣೈ ಅವರ ಸಾಧನೆಯನ್ನು ಗುರುತಿಸಿದೆ.
ಹೀರೋ ಮೋಟೋ ಕಾರ್ಪ್ ಸಂಸ್ಥೆ ಯ ಸಂಸ್ಥಾಪಕ ಡಾ| ಬ್ರಿಜ್ ಮೋಹನ್ಲಾಲ್ ಮುಂಜಾಲ್ ಅವರ 101ನೇ ಜನ್ಮ ದಿನದ ಸವಿ ನೆನಪಿಗಾಗಿ ತಯಾರಿಸಿದ 100 ಬೈಕ್ಗಳಲ್ಲಿ ಸುಮಾರು 10 ಲ.ರೂ. ಮೌಲ್ಯದ ಹೀರೋ ಸೆಂಟಿನ್ನಿಯಲ್ ಬೈಕ್ನ್ನು ಕರ್ನಾಟಕದ ಪ್ರಜ್ವಲ್ ಶೆಣೈ ಅವರಿಗೆ ಬೆಸ್ಟ್ ಕಸ್ಟಮರ್ ಅರ್ಹತೆಯ ರೂಪದಲ್ಲಿ ನೀಡಲಿದೆ.
ಉಡುಪಿಯ ಶಕ್ತಿ ಹೀರೋ ಮೋಟಾರ್ ಸಂಸ್ಥೆಯಲ್ಲಿ ಜೂ. 28ರಂದು ಸಂಸ್ಥೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಜ್ವಲ್ ಶೆಣೈ ಅವರಿಗೆ ಹೀರೊ ಸೆಂಟೆನ್ಸಿಯಲ್ ಬೈಕ್ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.