Home Karavali Karnataka ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಸಂವಾದ ಕಾರ್ಯಕ್ರಮ…!!

ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಸಂವಾದ ಕಾರ್ಯಕ್ರಮ…!!

ಕಾಪು : ಕಾಪು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ನವೀನ್ ಚಂದ್ರ ಎಸ್ ಸುವರ್ಣ ರವರ ನೇತೃತ್ವದಲ್ಲಿ ಸಮಿತಿಯ ಸದಸ್ಯರು ಕಾಪು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಕೋಟೆ, ಕಟಪಾಡಿ, ಕುರ್ಕಾಲು ಹಾಗೂ ಇನ್ನಂಜೆ ಗ್ರಾಮ ಪಂಚಾಯತ್ ಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳ ಅನುಷ್ಠಾನದ ಹಂತದಲ್ಲಿ ಇರಬಹುದಾದ ಸಮಸ್ಯೆಗಳು, ಯೋಜನೆಗಳ ಅನುಷ್ಠಾನದಲ್ಲಿ ಬರಬಹುದಾದ ಪ್ರಶ್ನೆಗಳ ಬಗ್ಗೆ ಹಾಗೂ ಯೋಜನೆಗಳನ್ನು ಸಮನ್ವಯತೆಯಿಂದ ಪರಿಣಾಮಕಾರಿಯಾಗಿ ಅನುಷ್ಠಾನಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಲಾಯಿತು.

ಗೃಹಲಕ್ಷ್ಮೀ ಯೋಜನೆಯ ಅರ್ಹತೆಯ ಮಾನದಂಡಗಳ ಬಗ್ಗೆ, ಗೃಹಜ್ಯೋತಿ ಯೋಜನೆಯಲ್ಲಿ ಸರಾಸರಿ ವಿದ್ಯುತ್ ಬಿಲ್ಲಿನ ಲೆಕ್ಕಾಚಾರದ ಬಗ್ಗೆ, ಕುಟುಂಬದ ಯಜಮಾನರ ಬದಲಾವಣೆಯ ಬಗ್ಗೆ, ಯುವನಿಧಿ, ಅನ್ನಭಾಗ್ಯ, ಶಕ್ತಿ ಯೋಜನೆಯ ಮಾರ್ಗಸೂಚಿಗಳ ಬಗ್ಗೆ ಅಧ್ಯಕ್ಷರು ಪ್ರಸ್ತಾಪಿಸಿ, ಸಭೆಯಲ್ಲಿ ಬಂದಂತಹ ಸಂದೇಹಗಳನ್ನು ನಿವಾರಿಸಲಾಯಿತು. ಯಾವುದೇ ಅರ್ಹ ಫಲಾನುಭವಿಯು ಯೋಜನೆಯ ಫಲಾನುಭವಿಯಾಗದೇ ತಪ್ಪಿಹೋಗದೇ ಇರಲು ಗ್ರಾಮ ಪಂಚಾಯತಿಯ ವಿವಿಧ ಸಭೆಗಳು, ಗ್ರಾಮ ಸಭೆಗಳು, ಸಾಮಾನ್ಯ ಸಭೆಗಳಲ್ಲಿ ಯೋಜನೆಗಳ ಬಗ್ಗೆ ಚರ್ಚಿಸಲು ತಿಳಿಸಲಾಯಿತು. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ವಾರು, ಸಂಬಂಧಿಸಿದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗ್ಯಾರಂಟಿ ಅದಾಲತ್ ಗಳನ್ನು ಮಾಡಿ, ಜನರಿಗೆ ತಾಂತ್ರಿಕ / ಫಲಾನುಭವಿಯಾಗಲು ಇರುವ ಸಮಸ್ಯೆಗಳನ್ನು ನಿವಾರಿಸಲಾಗುವುದೆಂದು ಅಧ್ಯಕ್ಷರು ತಿಳಿಸಿದರು.

ಸಭೆಗಳಲ್ಲಿ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಸದಸ್ಯರಾದ ಶ್ರೀ ಸುಧೀರ್ ಕರ್ಕೇರಾ, ಶ್ರೀ ಪ್ರಭಾಕರ ಆಚಾರ್ಯ ಕಟಪಾಡಿ, ಶ್ರೀ ಕೀರ್ತಿ ಕುಮಾರ್, ಶ್ರೀ ಎಸ್ ವಿಜಯ್, ಶ್ರೀಮತಿ ರೀನಾ ಡಿಸೋಜಾ, ಶ್ರೀ ರೋಶನ್ ಕುಮಾರ್, ಶ್ರೀ ಮಹೇಶ್ ಶೆಟ್ಟಿ, ಶ್ರೀ ಹಸನ್ಬಾವ ಉಪಸ್ಥಿತರಿದ್ದರು. ಕೋಟೆ, ಕಟಪಾಡಿ, ಕುರ್ಕಾಲು, ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರಮೀಳ ಜತ್ತನ್ನ, ಶ್ರೀಮತಿ ಪ್ರಭಾ ಶೆಟ್ಟಿ, ಶ್ರೀ ಪ್ರಶಾಂತ್ ಪೂಜಾರಿ, ಶ್ರೀಮತಿ ಮಾಲಿನಿ ಶೆಟ್ಟಿ, ಗ್ರಾಮ ಪಂಚಾಯತ್ಗಳ ಉಪಾಧ್ಯಕ್ಷರುಗಳು, ಸದಸ್ಯರು ಸಮಿತಿಯ ಕಾರ್ಯದರ್ಶಿ, ಕಾರ್ಯನಿರ್ವಹಣಾಧಿಕಾರಿ ಶ್ರೀ ಜೇಮ್ಸ್ ಡಿಸಿಲ್ವ, ಗ್ರಾಮ ಪಂಚಾಯತ್ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಆಡಳಿತಾಧಿಕಾರಿಯವರು, ಸಿಬ್ಬಂದಿ ವರ್ಗದವರು, ಅಂಗನವಾಡಿ ಮೇಲ್ವಿಚಾರಕರು ಹಾಗೂ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯ ಅಂಗನವಾಡಿ ಶಿಕ್ಷಕರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.