ಕೋಟ : ವಿಶ್ವ ಮಹಿಳಾ ದಿನಾಚರಣೆಯನ್ನು ಅಂಗವಾಗಿ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ, ಮಾತೃಸಂಸ್ಥೆಯಾದ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಹಾಗೂ ಸ್ನೇಹಕೂಟ ಮಣೂರು ಸಂಸ್ಥೆಯ ಸಹಯೋಗದೊಂದಿಗೆ ವಿಶೇಷ ಮಹಿಳಾ ದಿನೋತ್ಸವವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು ಮಾರ್ಚ್ 9ರಂದು ಸೋಮವಾರ ಬೆಳಿಗ್ಗೆ 10.30ಕ್ಕೆ, ಕೋಟದ ಪಂಚವರ್ಣ ಕಚೇರಿಯಲ್ಲಿ ಜರುಗಲಿದೆ. ಮಹಿಳೆಯರ ಸಾಧನೆ, ಶ್ರಮ ಹಾಗೂ ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಗೌರವಿಸುವ ಉದ್ದೇಶದಿಂದ ಈ ವರ್ಷವೂ ವಿಶೇಷ ಪುರಸ್ಕಾರ ಸಮಾರಂಭವನ್ನು ವ್ಯವಸ್ಥೆ ಮಾಡಲಾಗಿದೆ.
ಪಂಚವರ್ಣ ಮಹಿಳಾ ಮಂಡಲವು ಪ್ರತಿ ವರ್ಷ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ ಮಹಿಳೆಯನ್ನು ‘ಪಂಚವರ್ಣ ಮಹಿಳಾ ಸಾಧಕ ಪುರಸ್ಕಾರ’ಕ್ಕೆ ಆಯ್ಕೆ ಮಾಡುವ ಪದ್ಧತಿಯನ್ನು ಅನುಸರಿಸಿದೆ.
ಈ ವರ್ಷಕ್ಕೆ, ಜಿಲ್ಲೆಯ ಖ್ಯಾತ ಸಾಮಾಜಿಕ ಕಾರ್ಯಕರ್ತೆ ಹಾಗೂ ಸಾಸ್ತಾನ ಪಾಂಡೇಶ್ವರದ ಲೀಲಾವತಿ ಗಂಗಾಧರ್ ಅವರನ್ನು ಈ ಗೌರವಕ್ಕೆ ಆಯ್ಕೆಗೊಳಿಸಲಾಗಿದೆ.
ಲೀಲಾವತಿ ಗಂಗಾಧರ್ ಅವರು ದೀರ್ಘಕಾಲದಿಂದ ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಬಲೀಕರಣ, ಶಿಕ್ಷಣ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿ ಅನೇಕ ಕುಟುಂಬಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸೇವಾಭಾವ ಮತ್ತು ಸಮಾಜಮುಖಿ ನಿಲುವುಗಳನ್ನು ಪರಿಗಣಿಸಿ ಈ ವರ್ಷದ ಸಾಧಕ ಪುರಸ್ಕಾರವನ್ನು ನೀಡಲು ಮಂಡಳಿ ತೀರ್ಮಾನಿಸಿದೆ.
ಈ ಕುರಿತು ಮಾಹಿತಿ ಹಂಚಿಕೊಂಡ ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಹಾಗೂ ಸ್ನೇಹಕೂಟದ ಭಾರತಿ ವಿ. ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸುವ ನಿರೀಕ್ಷೆಯಿದ್ದು, ಪುರಸ್ಕಾರ ಪ್ರದಾನ ವಿದ್ವಾಂಸರ ಸಮ್ಮುಖದಲ್ಲಿ ಭವ್ಯವಾಗಿ ಜರುಗಲಿದೆ.



