ಕುಂದಾಪುರದಲ್ಲಿ ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರದ ಪಶ್ಚಿಮ ಬಂಗಾಳದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಲಾಗಿದೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ LPC NO-3/2024 / CC NO-2688/2015 ಪ್ರಕರಣದಲ್ಲಿ ಐಪಿಸಿ 498A, 323, 504, 506 ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ 3, 4, 6 ಸೆಕ್ಷನ್ಗಳಡಿ ಆರೋಪಿಯಾಗಿದ್ದ ಶಶಿಕಾಂತ್ ಶೆಟ್ಟಿ (44), ಅಕ್ಕುಂಜೆ ಸಿದ್ದಾಪುರ ಗ್ರಾಮದ ನಿವಾಸಿ, ಕಳೆದ ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದನು.
ಈತನನ್ನು ಠಾಣೆಯ ಎಎಸ್ಐ ಶಂಕರ್ ಎಸ್ ಹಾಗೂ ಹೆಚ್ಸಿ 50 ಅಶೋಕ್ ಶೆಟ್ಟಿ ನೇತೃತ್ವದ ತಂಡ ಪಶ್ಚಿಮ ಬಂಗಾಳದ ಮುರಿಶಿದಬಾದ್ ಜಿಲ್ಲೆಯ ಬನಿನಾಥಪುರ ಪ್ರದೇಶದಲ್ಲಿ ಪತ್ತೆಹಚ್ಚಿ ದಸ್ತಗಿರಿ ಮಾಡಿದೆ.
ಬಂಧಿತ ಆರೋಪಿಯನ್ನು ಮಾರ್ಚ್ 1, 2026 ರಂದು ಕುಂದಾಪುರದ ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಪ್ರಸ್ತುತ ಆರೋಪಿಯನ್ನು ಹಿರಿಯಡ್ಕ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಹತ್ತು ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸಿದ ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.



