ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ದುರಂತಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ನೈಜ ಹೋರಾಟಗಾರರ ವೇದಿಕೆಯ ಮುಖ್ಯಸ್ಥ ಎಚ್.ಎಂ.ವೆಂಕಟೇಶ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆದರೆ, ವಿರಾಟ್ ಕೊಹ್ಲಿ ವಿರುದ್ಧ ಇದುವರೆಗೆ ಯಾವುದೇ ಎಫ್ಐಆರ್ ಆಗಿಲ್ಲ ಎಂದು ತಿಳಿದು ಬಂದಿದೆ.
ಕ್ರಿಕೆಟಿಗ ವಿರಾಟ್ ಕೊಹ್ಲಿ ತನ್ನ ಸ್ವಾರ್ಥಕ್ಕಾಗಿ ವಿದೇಶ ಪ್ರವಾಸದ ಸಲುವಾಗಿ ಪಂದ್ಯಾವಳಿಯನ್ನು ಗೆದ್ದ ಮರು ದಿನವೇ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಕ್ರಿಕೆಟ್ ಮಂಡಳಿ, ಆರ್ಸಿಬಿ ಮ್ಯಾನೇಜೈಂಟ್, ಇವೆಂಟ್ ಮ್ಯಾನೇಜ್ಮೆಂಟ್ ಮೇಲೆ ಒತ್ತಡ ಹೇರಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾಲ್ತುಳಿತದಿಂದ ದುರ್ಮರಣ ಹೊಂದಿದ ತಕ್ಷಣ ಅವರು ಬೆಂಗಳೂರನ್ನು ಬಿಟ್ಟು ಲಂಡನ್ಗೆ ಪ್ರಯಾಣ ಬೆಳೆಸಿರುವುದು ಇದಕ್ಕೆ ಪೂರಕವಾದ ಸಾಕ್ಷಿಯಾಗಿರುತ್ತದೆ.
ವಿರಾಟ್ ಕೊಹ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಪಾರ ಬಂಧುಗಳಿಗೆ ಈ ಸಮಾರಂಭದಲ್ಲಿ ಭಾಗವಹಿಸಲು ಪ್ರಚೋದನೆ ನೀಡಿದ್ದರು. ಅವರು ಯಾವುದೇ ಸಾರ್ವಜನಿಕ ಸುರಕ್ಷತೆ ಬಗ್ಗೆ ಎಚ್ಚರಿಕೆ ನೀಡಿರಲಿಲ್ಲ. ದುರ್ಘಟನೆಗೆ ಪ್ರಮುಖ ಕೇಂದ್ರ ಬಿಂದು ವಿರಾಟ್ ಕೊಹ್ಲಿ ಆಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. 11 ಜನ ಯುವಕ, ಯುವತಿಯರು ದುರ್ಮರಣಕ್ಕೆ ಕಾರಣಕರ್ತರಾದ ವಿರಾಟ್ ಕೊಹ್ಲಿಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ವೆಂಕಟೇಶ್ ಉಲ್ಲೇಖಿಸಿದ್ದಾರೆ.
ಪೊಲೀಸರಿಂದ ಹಿಂಬರಹ: ನೀವು ನೀಡಿರುವ ದೂರನ್ನು ಸ್ವೀಕರಿಸಲಾಗಿದೆ. ಈ ದೂರು ಅರ್ಜಿಯ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ತನಿಖೆಯಲ್ಲಿರುತ್ತದೆ. ಆದ್ದರಿಂದ ತಾವು ನೀಡಿರುವ ದೂರನ್ನು ಪರಿಶೀಲಿಸಲಾಗುವುದು ಎಂದು ಪೊಲೀಸರು ವೆಂಕಟೇಶ್ ಅವರಿಗೆ ಹಿಂಬರಹ ನೀಡಿದ್ದಾರೆ.