ಶಿರ್ವ, ಫೆ.21: ಶಿರ್ವ ಸಮೀಪದ ಶಂಕರಪುರ ಕುರ್ಕಾಲು ಗ್ರಾಮದಲ್ಲಿ ಹಿರಿಯ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಘಟನೆ ನಡೆದ ಕೇವಲ ಮೂರರಿಂದ ನಾಲ್ಕು ಗಂಟೆಗಳೊಳಗೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ 21.02.2026 ರಂದು ಬೆಳಿಗ್ಗೆ ಸುಮಾರು 09:30 ಗಂಟೆಗೆ ಪಿರ್ಯಾದಿ ಹೆಲೆನ್ ಡಿಸೋಜ (69), ಗಂಡ: ದಿʼ ಎಡ್ವಿನ್ ಡಿಸೋಜ, ತಮ್ಮ ಮನೆಯ ಹಿಂಭಾಗದಲ್ಲಿ ಗೀತಾರವರೊಂದಿಗೆ ಮಲ್ಲಿಗೆ ಕಟ್ಟುತ್ತಿದ್ದ ವೇಳೆ, ಈ ಹಿಂದೆ ಬಾಡಿಗೆಗೆ ಇದ್ದ ಆನಂದ ಹಾಗೂ ಇನ್ನಿಬ್ಬರು ವ್ಯಕ್ತಿಗಳು ಬಾಡಿಗೆ ರೂಮ್ ವಿಚಾರಿಸಲು ಮನೆಗೆ ಬಂದಿದ್ದರು. ಮಾತನಾಡುತ್ತಾ ಚಹಾ ಕುಡಿದ ಬಳಿಕ, ರೂಮ್ ಖಾಲಿ ಇಲ್ಲವೆಂದು ಪಿರ್ಯಾದಿದಾರರು ತಿಳಿಸಿದ್ದರು.
ನಂತರ ಆರೋಪಿಗಳು ಪಕ್ಕದ ಮನೆಯಲ್ಲಿರುವ ಪಿರ್ಯಾದಿದಾರರ ಅಕ್ಕ ತೆರಜಾರವರ ಮನೆ ಕಡೆಗೆ ತೆರಳಿದ್ದರು. ಸುಮಾರು 9:45 ಗಂಟೆಗೆ ಅವರ ಪೈಕಿ ಒಬ್ಬನು ಮತ್ತೆ ಪಿರ್ಯಾದಿದಾರರ ಬಳಿಗೆ ಬಂದು, “ರೂಮ್ ಬೇಕಾದರೆ ಕರೆ ಮಾಡುತ್ತೇನೆ, ಮೊಬೈಲ್ ನಂಬರ್ ಕೊಡಿ” ಎಂದು ಹೇಳಿದ್ದಾನೆ. ಪಿರ್ಯಾದಿದಾರರು ಮೊಬೈಲ್ ಸಂಖ್ಯೆ ಹೇಳುತ್ತಿರುವಾಗ ಆತನೊಬ್ಬ ಕುತ್ತಿಗೆಗೆ ಕೈ ಹಾಕಿ, 28 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದು ಕಸಿದುಕೊಂಡು ಪರಾರಿಯಾಗಿದ್ದಾನೆ.
ಆತನನ್ನು ತಡೆಯಲು ಬಂದ ಪಿರ್ಯಾದಿದಾರರ ಅಕ್ಕ ತೆರಜ ಅವರನ್ನು ದೂಡಿ ಹಾಕಿ, ಮೂವರು ಆರೋಪಿಗಳು ಪಲ್ಸರ್ ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಕಳುವಾದ ಚಿನ್ನದ ಸರದ ಅಂದಾಜು ಮೌಲ್ಯ ರೂ. 3,50,000/- ಆಗಿದೆ.
ಈ ಕುರಿತು ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 20/2026 ರಂತೆ ಕಲಂ 309(4) ಜೊತೆಗೆ 3(5) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಟಿವಿ ಆಧಾರದ ಮೇಲೆ ತ್ವರಿತ ಕ್ರಮ
ಘಟನೆಯ ಮಾಹಿತಿ ತಿಳಿದು ತಕ್ಷಣ ಕಾರ್ಯಪ್ರವೃತ್ತರಾದ ಶಿರ್ವ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಮೀಪದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಪಲ್ಸರ್ ಬೈಕ್ನಲ್ಲಿ ಮೂವರು ಆರೋಪಿಗಳು ಬಂದು ಕೃತ್ಯ ಎಸಗಿರುವುದು ದೃಢಪಟ್ಟಿದೆ.
ಜಿಲ್ಲಾ ನಿಯಂತ್ರಣ ಕೊಠಡಿ ಮೂಲಕ ಜಿಲ್ಲೆಯ ಎಲ್ಲಾ ಚೆಕ್ಪೋಸ್ಟ್ಗಳಿಗೆ ಮಾಹಿತಿ ರವಾನಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಲಾಗಿದೆ. ನಾಕಾಬಂದಿ ವೇಳೆ ಶಿರೂರ ಚೆಕ್ಪೋಸ್ಟ್ನಲ್ಲಿ ಬೈಂದೂರು ಪೊಲೀಸರು ಆರೋಪಿಗಳನ್ನು ತಡೆದು ನಿಲ್ಲಿಸಿ, ಶಿರ್ವ ಪೊಲೀಸರ ವಶಕ್ಕೆ ನೀಡಿದ್ದಾರೆ.
ಚಿನ್ನದ ಸರ ಹಾಗೂ ಬೈಕ್ ವಶ
ಶಿರ್ವ ಪೊಲೀಸರು ಆರೋಪಿತರಿಂದ ಒಂದು ಬಂಗಾರದ ಚೈನ್ ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.



