ಕುಂದಾಪುರ : ಉಡುಪಿ ಜಿಲ್ಲೆಯ ಶಂಕರನಾರಾಯಣ ಸಮೀಪ ಪತ್ನಿ ವಿಯೋಗದಿಂದ ಮಾನಸಿಕವಾಗಿ ನೊಂದಿದ್ದ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಕೆಂಜಿಮನೆಯಲ್ಲಿ ನಡೆದಿದೆ.
ಆಜ್ರಿ ಗ್ರಾಮದ ಕೆಂಜಿಮನೆ ನಿವಾಸಿ ಎ. ಸುಂದರ (63) ಮೃತರು. ಇವರು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದು, ಸುಮಾರು ಒಂದೂವರೆ ವರ್ಷದ ಹಿಂದೆ ಪತ್ನಿ ಮೃತಪಟ್ಟ ನಂತರ ಮಾನಸಿಕವಾಗಿ ನೊಂದಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ದಿನಾಂಕ 17/09/2026 ರಂದು ಸಂಜೆ 7:15 ರಿಂದ ರಾತ್ರಿ 9:20 ರ ನಡುವೆ ಮನೆಯಲ್ಲಿ ಆಸಿಡ್ ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು ಕುಟುಂಬಸ್ಥರು ತಕ್ಷಣ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ರಾತ್ರಿ 11:46 ಕ್ಕೆ ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೃತರ ಪುತ್ರ ಗಣೇಶ್ ಎಸ್ (31) ನೀಡಿದ ದೂರಿನ ಮೇರೆಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ UDR ಕ್ರಮಾಂಕ 25/2026 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.



