Home Latest ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಸೆ.12ರಂದು ಮೌನ ಮೆರವಣಿಗೆ…!!

ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಸೆ.12ರಂದು ಮೌನ ಮೆರವಣಿಗೆ…!!

ಉಡುಪಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ಸ್ಥಳವನ್ನು ಗಂಗಾಜಲದಿಂದ ಶುದ್ಧೀಕರಿಸಿದ ಬಿಜೆಪಿ ನಾಯಕರ ದುರ್ವರ್ತನೆ ಹಾಗೂ ಅದನ್ನು ವಿರೋಧಿಸಿ ಪ್ರತಿಭಟಿಸಿದ ಕೇಂದ್ರ ವಿರೋಧ ಪಕ್ಷದ ನಾಯಕ್ ರಾಹುಲ್ ಗಾಂಧಿ ವಿರುದ್ಧವೇ ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಸೆ.12ರಂದು ಮೌನ ಮೆರವಣಿಗೆ ನಡೆಸಲಿದ್ದೇವೆ. ಗಾಂಧಿ ಪ್ರತಿಮೆಯ ಬಳಿ ಧರಣಿ ಮಾಡಲಿದ್ದೇವೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ್ ಸೊರಕೆ ತಿಳಿಸಿದರು.

ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಗುರುವಾರ (ಸೆ.10) ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವೆಲ್ಲರೂ ಬದಲಾವಣೆ ಕಂಡ 21ನೇ ಶತಮಾನದಲ್ಲಿದ್ದೇವೆ. ಆದರೆ, ಮನುಸ್ಮೃತಿಯನ್ನು ವೈಭವೀಕರಿಸುವ ಬಿಜೆಪಿ ನಾಯಕರು ದೇಶವನ್ನು 18ನೇ ಶತಮಾನಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ದೆಶದಲ್ಲಿ ಅಸ್ಪೃಶ್ಯತೆ ಆಚರಿಸುವುದು ಸಂವಿಧಾನದ 17ನೇ ವಿಧಿಯ ಪ್ರಕಾರ ಅಪರಾಧ. ಉತ್ತರಾಖಂಡದಲ್ಲಿ ಅಸ್ಪೃಷ್ಯತೆ ಆಚರಿಸಿದ ಬಿಜೆಪಿ ವಿರುದ್ಧ ಅಲ್ಲಿನ ಸರ್ಕಾರ ಯಾವುದೆ ಕ್ರಮ ಕೈಗೊಂಡಿಲ್ಲ. ಅಲ್ಲಿನ ಬಿಜೆಪಿಯವರು ತಳಮಟ್ಟದಿಂದ ಬೆಳೆದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಹಾಗೂ ಎಐಸಿಸಿ ಅಧ್ಯಕ್ಷರೂ ಆದ ಖರ್ಗೆ ಅವರಿಗಷ್ಟೇ ಅವಮಾನ ಮಾಡಿಲ್ಲ. ಸಮಸ್ತ ದೇಶದ ಜನರು ತಲೆ ತಗ್ಗಿಸುವ ಕಾರ್ಯ ಮಾಡಿದ್ದಾರೆ. ರಾಹುಲ್ ಗಾಂಧಿ ಈ ದೇಶದ ‘ಶೆಡೋ ಪ್ರೈಮ್ ಮಿನಿಸ್ಟರ್’ ಆಗಿದ್ದಾರೆ. ಅವರ ವಿರುದ್ಧವೇ ಪ್ರಕರಣ ದಾಖಲಿಸಿರುವುದನ್ನು ನಾವು ಖಂಡಿಸುತ್ತೇವೆ ‘ಕಳ್ಳರಿಗೆ ರಕ್ಷಣೆ, ಪೊಲೀಸರಿಗೇ ಜೈಲು’ ಎಂಬ ನೀತಿ ಬಿಜೆಪಿ ಸರ್ಕಾರದ್ದಾಗಿದೆ ಎಂದು ಸೊರಕೆ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ನ ನೂತನ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಪ್ರಚಾರ ಸಮಿತಿಯ ಉಪಾಧ್ಯಕ್ಷ ದಿನಕರ್ ಶೆಟ್ಟಿ, ಬೈಂದೂರು ಬ್ಲಾಕ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ರಾಜೀವ್ ಶೆಟ್ಟಿ, ಉಡುಪಿ ಬ್ಲಾಕ್ ಅಧ್ಯಕ್ಷ ಪ್ರಶಾಂತ ಪೂಜಾರಿ, ಕೋಶಾಧಿಕಾರಿ ದಯಾನಂದ್ ಡಿ. ಕಿದಿಯೂರು, ಕಾರ್ಯಕಾರಿ ಸಮಿತಿ ಸದಸ್ಯೆ ಚಂದ್ರಿಕಾ ಶೆಟ್ಟಿ ಇದ್ದರು.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಲಿದೆ. ಖರ್ಗೆಯವರು ಭಾಷಣ ಮಾಡಿದ ಜಾಗವನ್ನು ಗಂಗಾಜಲ ಹಾಕಿ ಶುದ್ಧೀಕರಿಸಿರುವುದು ಇದಕ್ಕೆ ನಿದರ್ಶನ. ಬಿಜೆಪಿಯವರ ಮನುವಾದಿ ಬುದ್ಧಿ ಖಂಡಿಸಿ ಸೆ.12ರಂದು ಬೆಳಗ್ಗೆ 10:30ಕ್ಕೆ ರಾಜ್ಯದಲ್ಲಿರುವ ಕಾಂಗ್ರೆಸ್ ಪ್ರಚಾರ ಸಮಿತಿಯ 41 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಸತ್ಯಾಗ್ರಹ ನಡೆಯಲಿದೆ. ಗಾಂಧಿ ಸ್ಮೃತಿ, ಭಜನೆಯೊಂದಿಗೆ ಧರಣಿ ನಡೆಸಲಿದ್ದೇವೆ ಎಂದು  ಹರೀಶ್ ಕಿಣಿ ಅಲೆವೂರು. ಪ್ರಚಾರ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಇವರು ಹೇಳಿದರು.