ಬಂಟ್ವಾಳ: ಹಾಸನದಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ
ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ, ₹1,05,59,450 ಮೌಲ್ಯದ ಮಾದಕವಸ್ತು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಕೆಂಗೇರಿ ನಿವಾಸಿ ಮುಹಮ್ಮದ್ ಅಮೀರ್ ಜರ್ಜಾರ್(35) ಬಂಧಿತ ಆರೋಪಿ.
ಆ.16ರಂದು ರಾತ್ರಿ ಹಾಸನದಿಂದ ಮಂಗಳೂರು ಕಡೆಗೆ ಮಾದಕವಸ್ತು ಸಾಗಾಟ ಮಾಡುತ್ತಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಟಿ. ಅವರಿಗೆ ಮಾಹಿತಿ ಲಭಿಸಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ KA-01-MA-1284 ನೋಂದಣಿಯ ಕಾರನ್ನು ತಡೆದು ಪರಿಶೀಲಿಸಿದರು.ಈ ವೇಳೆ ಕಾರಿನಲ್ಲಿ 538.63 ಗ್ರಾಂ MDMA ಮತ್ತು 99.12 ಗ್ರಾಂ ಕೊಕೇನ್ ಪತ್ತೆಯಾಗಿದೆ.
ಅಲ್ಲದೆ ಖಾಲಿ ಪ್ಲಾಸ್ಟಿಕ್ ಡಬ್ಬಿಗಳು, ಡಿಜಿಟಲ್ ತೂಕದ ಯಂತ್ರ ಸೇರಿದಂತೆ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ MDMAಯ ಅಂದಾಜು ಮೌಲ್ಯ ₹53.86 ಲಕ್ಷ ಹಾಗೂ ಕೊಕೇನ್ನ ಮೌಲ್ಯ ₹49.56 ಲಕ್ಷವಾಗಿದ್ದು, ಇತರ ಸೊತ್ತುಗಳ ಸಹಿತ ಒಟ್ಟು ಮೌಲ್ಯ ₹1.05 ಕೋಟಿಗೂ ಅಧಿಕ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.




