Home Crime ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್‌ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…!!

ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್‌ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…!!

ಮಂಗಳೂರು: ಬೆಳ್ತಂಗಡಿಯಲ್ಲಿ ನಿನ್ನೆ ನಡೆದ ಕಾಲೇಜು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ತನಿಖೆಯಲ್ಲಿ ಇದು ತನ್ನ ಅಪಹರಣದ ಕಟ್ಟುಕಥೆ ಕಟ್ಟಿರುವ ಮಾಹಿತಿ ತಿಳಿದುಬಂದಿದೆ.

ವಿದ್ಯಾರ್ಥಿನಿಯೇ ತನ್ನ ಕೈಗೆ ಬ್ಲೇಡ್‌ನಲ್ಲಿ ಗೀರಿ ಅಪಹರಣದ ಕಥೆ ಕಟ್ಟಿದ್ದಾಳೆಂದು ಪೊಲೀಸ್‌ ತನಿಖೆಯಲ್ಲಿ ತಿಳಿದು ಬಂದಿದೆ.

ಕಾಶಿಬೆಟ್ಟು ಸರಕಾರಿ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಸ್ಕೂಟರ್‌ ತಡೆದು ಕಾರಿನಲ್ಲಿ ಬಂದ ಮೂವರು ಸುದೆಮುಗೇರು ಎಂಬಲ್ಲಿ ಕಿಡ್ನಾಪ್‌ಗೆ ಯತ್ನ ಮಾಡಿದ್ದಾರೆ. ಈ ವೇಳೆ ಚೂರಿಯಿಂದ ಹಲ್ಲೆ ಮಾಡಲಾಗಿದೆ ಎಂದು ಯುವತಿ ದೂರಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಈ ಘಟನೆಯ ನಂತರ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಮತ್ತು ಪೊಲೀಸರು ಆಸ್ಪತ್ರೆಗೆ ತೆರಳಿ ಘಟನೆ ಕುರಿತು ಮಾಹಿತಿ ಕೂಡಾ ಪಡೆದಿದ್ದರು.

ಕಾರಿನ ನಂಬರ್‌ ಪ್ಲೇಟ್‌ಗೆ ಬಟ್ಟೆ ಕಟ್ಟಿದ್ದು, ಮುಖಕ್ಕೆ ಮುಸುಕು ಹಾಕಿದ್ದರು, ಮೂವರಿದ್ದರು, ಬೈಕ್‌ವೊಂದು ಹಿಂದಿನಿಂದ ಬಂದಿದ್ದಕ್ಕೆ ನನ್ನನ್ನು ಬಿಟ್ಟು ಎಸ್ಕೇಪ್‌ ಆಗಿದ್ದರು ಎನ್ನುವ ಕಥೆಯನ್ನು ಯುವತಿ ಪೊಲೀಸರಲ್ಲಿ ಹೇಳಿದ್ದಳು.

ಇದರಂತೆ ಪೊಲೀಸರು ಘಟನೆ ನಡೆದಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದು, ಯಾವುದೇ ಸಾಂದರ್ಭಿಕ ಸಾಕ್ಷಿ ದೊರಕಲಿಲ್ಲ. ಹಾಗಾಗಿ ವಿದ್ಯಾರ್ಥಿನಿಯಿಂದ ಹೆಚ್ಚಿನ ಮಾಹಿತಿ ಪಡೆಯಲು ಮುಂದಾಗಿದ್ದಾರೆ.

ಕಾರಿನ ಬಣ್ಣ, ಕಾರು ಯಾವುದು? ಎಲ್ಲವನ್ನೂ ಕರೆಕ್ಟ್‌ ಆಗಿ ಹೇಳಲು ಹೇಳಿದಾಗ ಆಕೆ ತಬ್ಬಿಬ್ಬಾಗಿದ್ದಾಳೆ. ನಂತರ ಅಪಹರಣ ಘಟನೆಯೇ ಸುಳ್ಳು ಎಂದು ಯುವತಿ ಹೇಳಿದ್ದು, ಬೇರೆ ಕಾಲೇಜು ಸೇರುವುದಕ್ಕೆ ಅಪಹರಣದ ಕತೆ ಕಟ್ಟಿದ್ದಾಗಿ ಹೇಳಿರುವುದಾಗಿ ವರದಿಯಾಗಿದೆ.

ಗ್ರಾಮೀಣ ಭಾಗದ ಕಾಲೇಜು ಬದಲು ಮಂಗಳೂರು ನಗರದ ಕಾಲೇಜಿಗೆ ಹೋಗಲು ಬಯಸಿದ್ದು, ಅದಕ್ಕೆ ತಾನೇ ಬ್ಲೇಡ್‌ನಿಂದ ಕೈಯನ್ನು ಕೊಯ್ದಿರುವುದಾಗಿ ಹೇಳಿದ್ದಾಳೆ.