ಮಂಗಳೂರು : ಉಳ್ಳಾಲ ತೊಕ್ಕೊಟ್ಟಿನ ಫೈನಾನ್ಸ್ ಒಂದರಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚಿಸಿದ್ದ ಖತರ್ನಾಕ್ ಗ್ಯಾಂಗ್ನ ಆರು ಮಂದಿ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿ, ಅವರ ವಂಚನೆಯ ಜಾಲವನ್ನು ಭೇದಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ವಿಕ್ರಮ್ ಅಮೃತ್ ಲಾಲ್ ಬಫ್ನ (48), ಹರೇಕಳದ ಮಹಮ್ಮದ್ ಇಸ್ಮಾಯಿಲ್ (35), ಮಹಮ್ಮದ್ ಮಿಸ್ಬಾ (30), ಸುರತ್ಕಲ್ ಕಾಟಿಪಳ್ಳದ ಉಮರ್ ಫಾರೂಕ್ (52), ಉಳ್ಳಾಲ ಮೇಲಂಗಡಿಯ ಇಮ್ತಿಯಾಝ್ (29), ಮತ್ತು ಮಂಚಿಲದ ಝಹೀಮ್ ಅಹ್ಮದ್ (20) ಎಂದು ಗುರುತಿಸಲಾಗಿದೆ.
ಈ ಜಾಲದ ಮತ್ತೋರ್ವ ಸದಸ್ಯ, ಹೆಜಮಾಡಿಯ ನೌಫಾಲ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
ತೊಕ್ಕೊಟ್ಟು ಕೇಂದ್ರ ಭಾಗದ ಕೊಣಾಜೆ ವಿವಿ ರಸ್ತೆಯ ದ್ವಾರಕ ಕಾಂಪ್ಲೆಕ್ಸ್ ನಲ್ಲಿ, ಗುರು ರಾಘವೇಂದ್ರ ಫೈನಾನ್ಸ್ & ಇನ್ವೆಸ್ಟ್ ಮೆಂಟ್ ಕಚೇರಿ ಹೊಂದಿದ್ದು ಕಳೆದ 25 ವರುಷಗಳಿಂದಲೂ ಫೈನಾನ್ಸ್ ವ್ಯವಹಾರ ನಡೆಸುತ್ತಿರುವ ದಿನೇಶ್ ರೈ ಕಳ್ಳಿಗೆ ಎಂಬವರು ಮೋಸ ಹೋಗಿದ್ದು ಉಳ್ಳಾಲ ಠಾಣೆಗೆ ದೂರು ನೀಡಿದ್ದರು.
ನವೆಂಬರ್ 22ರ ಶನಿವಾರ ಸಂಜೆ ಸುಮಾರು 5 ಗಂಟೆಗೆ ದಿನೇಶ್ ರೈ ಅವರ ಫೈನಾನ್ಸ್ ಗೆ ಬಂದಿದ್ದ ಹೆಜಮಾಡಿ ನಿವಾಸಿ ನೌಫಾಲ್ ಮತ್ತು ಉಳ್ಳಾಲ ಮಂಚಿಲದ ನಿವಾಸಿ ಝಹೀಮ್ ಅಹ್ಮದ್ ಎಂಬವರು 41 ಗ್ರಾಂ ತೂಗುವ ಎರಡು ಚೈನ್ ಗಳನ್ನ ನೀಡಿ ಸಾಲ ಕೊಡುವಂತೆ ಹೇಳಿದ್ದಾರೆ. ಫೈನಾನ್ಸ್ ಕಚೇರಿಯಲ್ಲಿದ್ದ ಮಾಲಕ ದಿನೇಶ್ ರೈ ಮತ್ತು ಸಿಬ್ಬಂದಿ ನಿಕೇಶ್ ಎಂಬವರು ಪರಿಶೀಲಿಸಿದಾಗ ಚೈನ್ ಗಳ ಕೊಂಡಿಯಲ್ಲಿದ್ದ ಚಿನ್ನದ ಪರಿಶುದ್ಧತೆಯ 916 ಹಾಲ್ ಮಾರ್ಕ್ ಇರುವುದನ್ನು ನೋಡಿದ್ದು ಉಜ್ಜುವ ಕಲ್ಲಿನಲ್ಲಿ ಚೆಕ್ ಮಾಡಿದಾಗ ಚಿನ್ನ ಎಂದು ಕಂಡುಬಂದಿತ್ತು. ಫೈನಾನ್ಸ್ ಮಾಲಕರು ಝಹೀಮ್ ಅಹ್ಮದ್ ಹೆಸರಿನಲ್ಲಿ ಆಭರಣಗಳನ್ನು ಅಡವು ಇಟ್ಟು 3 ಲಕ್ಷದ 55 ಸಾವಿರ ಹಣವನ್ನು ಸಾಲ ನೀಡಿದ್ದಾರೆ.



