Home Crime ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿಯ ಬಂಧನ..!!

ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿಯ ಬಂಧನ..!!

ಬೆಳ್ತಂಗಡಿ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೋರ್ವನನ್ನು ಪೂಂಜಾಲಕಟ್ಟೆ ಠಾಣಾ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಕೇರಳ ಮೂಲದ ತಲಪಾಡಿ ನಿವಾಸಿ ಕಿರಣ್ ಎಂದು ಗುರುತಿಸಲಾಗಿದೆ.

ಬೆಳ್ತಂಗಡಿ ಮಾಲಾಡಿ ಗ್ರಾಮದ ನಿವಾಸಿ ಪ್ರಕಾಶ್‌ ಶೆಟ್ಟಿ ಎಂಬವರ ದೂರಿನಂತೆ ಅವರ ಮನೆಯ ಸಮೀಪ ಶ್ರೀಮತಿ ಪ್ರೇಮಾ ಶೆಟ್ಟಿ ಎಂಬವರ ಮನೆಯಿದ್ದು, ಪ್ರೇಮಾ ಶೆಟ್ಟಿರವರು ಕೆಲ ಸಮಯದಿಂದ ವಿದೇಶದಲ್ಲಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಗೆ ಸಿ.ಸಿ ಟಿ.ವಿ ಅಳವಡಿಸಿರುತ್ತಾರೆ. ನ.9ರಂದು ಬೆಳಿಗ್ಗೆ, ಪ್ರೇಮಾರವರ ಮಗಳು ಪ್ರಕಾಶ್‌ ಶೆಟ್ಟಿರವರಿಗೆ ಕರೆ ಮಾಡಿ ಅವರ ತಾಯಿಯ ಮನೆಯಲ್ಲಿ ಯಾರೋ ವ್ಯಕ್ತಿ ಕಳ್ಳತನಕ್ಕೆ ಬಂದಿರುವಂತೆ ಸಿ.ಸಿ ಟಿ.ವಿಯಲ್ಲಿ ಕಾಣುತ್ತಿರುವುದಾಗಿ ತಿಳಿಸಿರುತ್ತಾರೆ.

ತಕ್ಷಣ ಪ್ರೇಮರವರ ಮನೆಯ ಬಳಿ ತೆರಳಿ ನೋಡಿದಾಗ ಪ್ರೇಮಾರವರ ಮನೆಯ ಮೇಲ್ಚಾವಣಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು ನಿಂತುಕೊಂಡಿದ್ದು, ಪ್ರಕಾಶ್‌ ಶೆಟ್ಟಿಯವರನ್ನು ನೋಡಿ ಕೆಳಗೆ ಹಾರಿ ಓಡಿ ತಪ್ಪಿಸಲು ಪ್ರಯತ್ನಿಸಿರುತ್ತಾನೆ. ಈ ವೇಳೆ ಆತನನ್ನು ಹಿಡಿಯಲು ಪ್ರಯತ್ನಿಸಿದಾಗ, ಅಪರಿಚಿತ ವ್ಯಕ್ತಿಯು ಆತನ ಕೈಯಲ್ಲಿದ್ದ ರಾಡಿನಿಂದ ಹಲ್ಲೆ ನಡೆಸಿರುತ್ತಾನೆ.

ಬಳಿಕ ಸ್ಥಳೀಯ ನಿವಾಸಿಗಳ ಸಹಾಯದಿಂದ ಅಪರಿಚಿತ ವ್ಯಕ್ತಿಯನ್ನು ಹಿಡಿಯಲಾಗಿರುತ್ತದೆ. ಆತನ ಬಗ್ಗೆ ವಿಚಾರಿಸಿದ್ದು ಆತನು ಕೇರಳ ಮೂಲದ, ತಲಪಾಡಿ ನಿವಾಸಿ ಕಿರಣ್ ಎಂಬುದಾಗಿ ತಿಳಿಸಿದ್ದು, ನಂತರ ಆತನನ್ನು ಪೂಂಜಾಲಕಟ್ಟೆ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಲಾಗಿರುತ್ತದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ: 73/2025, ಕಲಂ: 331(1) 62 118(1) 307 BNS ACT ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಆರೋಪಿತನ ಪ್ರಾಥಮಿಕ ವಿಚಾರಣೆಯ ವೇಳೆ ಆರೋಪಿತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ, ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಸೇರಿದಂತೆ, ಒಟ್ಟು 13 ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದ್ದು, ತನಿಖೆ ಮುಂದುವರಿದಿರುತ್ತದೆ.