ಪುತ್ತೂರು: ಕಳೆದ 6 ತಿಂಗಳ ಹಿಂದೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುರ ಎಂಬಲ್ಲಿ ಬಸ್- ಕಾರು ನಡುವೆ ಡಿಕ್ಕಿ ಸಂಭವಿಸಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಬರೋಬ್ಬರಿ 130 ದಿನ ಕೋಮಾದಲ್ಲಿದ್ದ ಅಪೂರ್ವ ಭಟ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇದರ ಬೆನ್ನಲ್ಲೇ ಇದೇ ಅಪಘಾತದಲ್ಲಿ ಗಾಯಗೊಂಡಿದ್ದ ಅಪೂರ್ವ ಭಟ್ ತಂದೆ ಈಶ್ವರ್ ಭಟ್ (70) ಕೂಡ ಚಿಕಿತ್ಸೆ ಫಲಕಾರಿಯಾಗದೆ ನ.3ರಂದು ಕೊನೆಯುಸಿರೆಳೆದಿದ್ದಾರೆ.
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುರ ಜಂಕ್ಷನ್ ಬಳಿಯ ತಿರುವಿನಲ್ಲಿ ಮೇ 27ರಂದು ಈ ದುರ್ಘಟನೆ ನಡೆದಿತ್ತು.
ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ಅಪೂರ್ವ ಭಟ್ ತವರು ಮನೆಯಲ್ಲಿ ಶ್ರಾದ್ಧ ಕಾರ್ಯ ಇರುವ ಹಿನ್ನಲೆಯಲ್ಲಿ ತನ್ನ ಪುತ್ರಿಯೊಂದಿಗೆ ಬೆಳಗ್ಗೆ ಬೆಂಗಳೂರಿನಿಂದ ಪುತ್ತೂರಿಗೆ ಆಗಮಿಸಿದ್ದರು.
ತಂದೆ ಈಶ್ವರ್ ಭಟ್ ತನ್ನ ವ್ಯಾಗನರ್ ಕಾರಿನಲ್ಲಿ ಅವರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಮುರದಿಂದ ಪಡ್ನೂರಿಗೆ ಒಳರಸ್ತೆಗೆ ತಿರುಗಿಸುತ್ತಿದ್ದ ವೇಳೆ ಮುಂಭಾಗದಿಂದ ಆಗಮಿಸುತ್ತಿದ್ದ ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿತ್ತು. ಇದರಿಂದಾಗಿ ಈಶ್ವರಭಟ್ ಮತ್ತು ಅಪೂರ್ವ ಇಬ್ಬರೂ ಗಂಭೀರ ಗಾಯಗೊಂಡಿದ್ದರು. ಕಾರಿನಲ್ಲಿದ್ದ ಅಪೂರ್ವ ಅವರ ಪುಟ್ಟ ಮಗು ಅಪಾಯದಿಂದ ಪಾರಾಗಿತ್ತು.
130 ದಿನಗಳಿಗೂ ಅಧಿಕ ಕಾಲ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆದ ಅಪೂರ್ವ ಅವರ ಆರೋಗ್ಯ ಸ್ಥಿತಿ ಕುರಿತು ಅವರ ಪತಿ ಆಶೀಶ್ ಸಾರಡ್ಕ ಅವರು ಜಾಲತಾಣಗಳಲ್ಲಿ ನಿರಂತರವಾಗಿ ಮಾಹಿತಿ ಹಂಚಿಕೊಂಡಿದ್ದು, ಸಾವಿರಾರು ಮಂದಿ ಅವರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿದ್ದರು.



