ಕುಂದಾಪುರ, ಜೂ. 19: ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಗುಡಿಬೆಟ್ಟು ಸಮೀಪ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಜುಗಾರಿ ಮೇಲೆ ಕುಂದಾಪುರ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿ ನಗದು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಉಮೇಶ್ ನಾಯ್ಕ ಅವರಿಗೆ ಗುಡಿಬೆಟ್ಟು ಪ್ರದೇಶದಲ್ಲಿ ಕೋಳಿ ಅಂಕ ಜುಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಅದರಂತೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಮರೆಯಲ್ಲಿ ನಿಂತು ಪರಿಶೀಲಿಸಿದಾಗ, ಕೆಲವರು ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ ಕಾದಾಟಕ್ಕೆ ಬಿಟ್ಟು, ಅದರ ಮೇಲೆ ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟದಲ್ಲಿ ತೊಡಗಿರುವುದು ಕಂಡುಬಂದಿದೆ.
ತಕ್ಷಣ ದಾಳಿ ನಡೆಸಿದ ಪೊಲೀಸರು ನಾರಾಯಣ (48), ಮೊವಾಡಿ, ತ್ರಾಸಿ, ಪ್ರಶಾಂತ್ (43), ಅರ್ಕದಕಟ್ಟೆ, ನಿಟ್ಟೂರು, ಉಡುಪಿ, ಹಾಗೂ ನವರಾಜ್ (51), ವಿಷ್ಣುಮೂರ್ತಿ ನಗರ, ನಿಟ್ಟೂರು, ಉಡುಪಿ ಅವರನ್ನು ಬಂಧಿಸಿದ್ದಾರೆ. ಉಳಿದ ಆರೋಪಿತರು ಸ್ಥಳದಿಂದ ಪರಾರಿಯಾಗಿದ್ದಾರೆ.
ಆರೋಪಿತರಿಂದ ಕೋಳಿ ಅಂಕ ಜುಗಾರಿಗೆ ಬಳಸಿದ್ದ ₹1,600 ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿತರು ತಮ್ಮ ಸ್ವಂತ ಲಾಭಕ್ಕಾಗಿ ಕೋಳಿಗಳಿಗೆ ಆಹಾರ ಮತ್ತು ನೀರು ನೀಡದೆ, ಕಾಲಿಗೆ ಕತ್ತಿ ಕಟ್ಟಿ ಹಿಂಸೆ ನೀಡಿ, ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಕೋಳಿ ಅಂಕ ಜುಗಾರಿ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.




