Home Crime ಗುಂಪು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದು ಅವರ ಹೆಡೆಮುರಿ ಕಟ್ಟುವುದು ಖಂಡಿತ : ದಿನೇಶ್ ಗುಂಡೂರಾವ್…!!

ಗುಂಪು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದು ಅವರ ಹೆಡೆಮುರಿ ಕಟ್ಟುವುದು ಖಂಡಿತ : ದಿನೇಶ್ ಗುಂಡೂರಾವ್…!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಹಿಂದೆ ಸಾಮರಸ್ಯ ಮತ್ತು ಭಾವೈಕ್ಯದ ನೆಲೆಯಾಗಿತ್ತು. ಆದರೆ ಕೆಲ ಸಮಾಜಘಾತುಕ ಶಕ್ತಿಗಳು ಹಲವು ವರ್ಷಗಳಿಂದ ಜಿಲ್ಲೆಯ ಕೋಮು ಸೌರ್ಹಾದಕ್ಕೆ ಕೊಳ್ಳಿ ಇಡುವ ಯತ್ನ ಮಾಡುತ್ತಿವೆ. ಮಂಗಳೂರು ನಗರ ಹೊರವಲಯದ ಕುಡುಪುವಿನಲ್ಲಿ ನಡೆದ ಗುಂಪು ಹತ್ಯೆ ಪ್ರಕರಣ ಇದರ ಒಂದು ಭಾಗ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.

ಯುವಕ ಅಶ್ರಫ್ ಕೊಲೆಗೆ ಸಂಬಂಧಿಸಿ ಈಗಾಗಲೇ ಮಂಗಳೂರು ಪೊಲೀಸರು ಶೀಘ್ರ ಕ್ರಮ ತೆಗೆದುಕೊಂಡಿದ್ದಾರೆ. ಕೃತ್ಯದಲ್ಲಿ ಭಾಗಿಯಾದ 20 ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಕೆಲವು ದುಷ್ಕರ್ಮಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಅವರ ಹೆಡೆಮುರಿ ಕಟ್ಟುವುದು ಖಂಡಿತ ಎಂದು ಉಸ್ತುವಾರಿ ಸಚಿವರು ತಿಳಿಸಿದ್ದಾರೆ ‌

ಕೊಲೆ ಪ್ರಕರಣವನ್ನು ತ್ವರಿತವಾಗಿ ಭೇದಿಸಿ ಆರೋಪಗಳನ್ನು ಬಂಧಿಸಿದ ಮಂಗಳೂರು ಪೊಲೀಸರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅದೇ ರೀತಿ ಜಿಲ್ಲೆಯ ಸೌಹಾರ್ದ ಕಾಪಾಡುವುದು ಕೂಡ ಪೊಲೀಸರ ಜವಾಬ್ದಾರಿ. ಈ ಘಟನೆಯ ಬಳಿಕ ಕೆಲ ಸಮಾಜಘಾತಕ ಶಕ್ತಿಗಳು ದ್ವೇಷ ಹರಡುವ ಪ್ರಯತ್ನ ನಡೆಸುವ ಸಾಧ್ಯತೆಯಿದೆ. ಪೊಲೀಸರು ಅದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದರು.

ಕೋಮು ಸಂಘರ್ಷ ಹುಟ್ಟು ಹಾಕುವ ಮೂಲಕ ನಮ್ಮ ಸರಕಾರಕ್ಕೆ ಕೆಟ್ಟ ಹೆಸರು ತರಬೇಕೆನ್ನುವುದು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಉದ್ದೇಶವಾಗಿದೆ. ದಕ್ಷಿಣ ಕನ್ನಡದ ಜನ ಈ ಹುನ್ನಾರಗಳನ್ನು ಅರಿಯಬೇಕು. ಪ್ರಜ್ಞಾವಂತರ ಜಿಲ್ಲೆ ಎಂದೇ ಹೆಸರಾದ ಜಿಲ್ಲೆಗೆ ಕಳಂಕ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಕಾನೂನು ಕೈಗೆತ್ತಿಕೊಳ್ಳುವ, ಸಮಾಜದ ಸ್ವಾಸ್ಥ್ಯ ಕೆಡಿಸುವ, ಸಾಮರಸ್ಯಕ್ಕೆ ಕೊಳ್ಳಿ ಇಡುವ ಯಾವುದೇ ದುಷ್ಟ ಪ್ರಯತ್ನಕ್ಕೆ ನಮ್ಮ ಸರಕಾರ ಅವಕಾಶ ಮಾಡಿಕೊಡುವುದಿಲ್ಲ. ಈ ವಿಚಾರದಲ್ಲಿ ನಮ್ಮದು ಶೂನ್ಯ ಸಹಿಷ್ಣುತೆ ಎಂಬ ಮಾತನ್ನು ಸಮಾಜ ಘಾತಕರಿಗೆ ಎಚ್ಚರಿಕೆಯ ರೂಪದಲ್ಲಿ ಹೇಳಲು ಬಯಸುತ್ತೇನೆ ಎಂದವರು ಎಚ್ಚರಿಸಿದ್ದಾರೆ.

ದಯೆಗಿಂತ ಮಿಗಿಲಾದ ಧರ್ಮವಿಲ್ಲ ಎಂಬ ಬಸವಣ್ಣನವರ ಆಶಯದಂತೆ ನಮ್ಮ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಆಶಯಕ್ಕೆ ಧಕ್ಕೆ ಬರಬಾರದು. ಸಮಾಜದ ಶಾಂತಿ ಕದಡಬಾರದು ಎಂದು ಉಸ್ತುವಾರಿ ಸಚಿವರು ಹೇಳಿಕೆಯ ಮೂಲಕ ಮನವಿ ಮಾಡಿಕೊಂಡರು.