ಉಡುಪಿ: ಶ್ರೀ ಕೃಷ್ಣ ಮಠದ ಆವರಣದಲ್ಲಿ ಉಗ್ರ ವರ್ತನೆಯಿಂದ ಭಯದ ವಾತಾವರಣ ಸೃಷ್ಟಿಸಿದ್ದ ಅಪರಿಚಿತ ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ವಶಕ್ಕೆ ಪಡೆದು ದೊಡ್ಡಣಗುಡ್ಡೆಯ ಡಾ. ಎ.ವಿ. ಬಾಳಿಗ ಆಸ್ಪತ್ರೆಗೆ ದಾಖಲಿಸಿರುವ ಘಟನೆ ರವಿವಾರ ನಡೆದಿದೆ.
ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿದ್ದ ಯುವಕನ ಅಸಾಮಾನ್ಯ ವರ್ತನೆಯಿಂದ ಮಠಕ್ಕೆ ಆಗಮಿಸಿದ್ದ ಯಾತ್ರಾರ್ಥಿಗಳು ಭೀತಿಗೊಳಗಾಗಿದ್ದರು.
ಈ ಸಂದರ್ಭ ಮಠದ ರಕ್ಷಣಾ ಸಿಬ್ಬಂದಿಯ ಮನವಿಗೆ ಸ್ಪಂದಿಸಿದ ನಿತ್ಯಾನಂದ ಒಳಕಾಡುವರು ತಕ್ಷಣ ಸ್ಥಳಕ್ಕೆ ಧಾವಿಸಿ, ಅಂಬುಲೆನ್ಸ್ ವ್ಯವಸ್ಥೆ ಮೂಲಕ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದರು.
ಆಸ್ಪತ್ರೆಗೆ ಸಾಗಿಸುವ ವೇಳೆ ಯುವಕ ಅಂಬುಲೆನ್ಸ್ನಲ್ಲಿಯೇ ರಂಪಾಟ ಮುಂದುವರಿಸಿದ್ದು, ಹಲ್ಲೆಗೆ ಯತ್ನಿಸಿದ ಕಾರಣ ನಡುರಸ್ತೆಯಲ್ಲೇ ವಾಹನವನ್ನು ನಿಲ್ಲಿಸಿ ಸಾರ್ವಜನಿಕರ ಸಹಕಾರದಿಂದ ಯುವಕನ ಕೈಕಾಲುಗಳನ್ನು ಹಗ್ಗದಿಂದ ಭದ್ರಗೊಳಿಸಿ ನಂತರ ಆಸ್ಪತ್ರೆಗೆ ಸಾಗಿಸಲಾಯಿತು.
ಯುವಕ ಬೆಳ್ಮಣ್ ಮೂಲದವನೆಂದು ತಿಳಿದುಬಂದಿದ್ದು, ಸಂಬಂಧಿಕರು ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಮಾಹಿತಿ ನೀಡಲಾಗಿದೆ.










