ಉಡುಪಿ : ತುಳು ರಂಗಭೂಮಿಯ ಹಿರಿಯ ಕಲಾವಿದ, ಕಾಪು ರಂಗ ತರಂಗ ತಂಡದ ಸ್ಥಾಪಕ ಸದಸ್ಯ ಹಾಗೂ ಮಾಜಿ ಸಂಚಾಲಕ ಸುಜಿತ್ ಶೆಟ್ಟಿ ಪಾದೂರು (54) ಅವರು ಅನಾರೋಗ್ಯದ ಕಾರಣದಿಂದ ಶುಕ್ರವಾರ ನಿಧನ ಹೊಂದಿದರು.
ಅವರ ಅಗಲಿಕೆಯು ಕರಾವಳಿಯ ಸಾಂಸ್ಕೃತಿಕ ಮತ್ತು ರಂಗಭೂಮಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.
ಸುಜಿತ್ ಶೆಟ್ಟಿ ಅವರು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ತುಳು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ದಿವಂಗತ ಕೆ. ಲೀಲಾಧರ ಶೆಟ್ಟಿ ಅವರ ಸಾರಥ್ಯದಲ್ಲಿ ಆರಂಭವಾದ ‘ಕಾಪು ರಂಗ ತರಂಗ’ ನಾಟಕ ತಂಡದ ಬೆಳವಣಿಗೆಯಲ್ಲಿ ಇವರ ಪಾತ್ರ ಅತ್ಯಂತ ದೊಡ್ಡದು. ತಂಡದ ಸ್ಥಾಪಕ ಸದಸ್ಯರಾಗಿ ಮಾತ್ರವಲ್ಲದೆ, ದೀರ್ಘಕಾಲದವರೆಗೆ ತಂಡದ ಸಂಚಾಲಕರಾಗಿ ಸಮರ್ಥವಾಗಿ ಜವಾಬ್ದಾರಿ ನಿಭಾಯಿಸಿದ್ದರು.
ಸುಜಿತ್ ಶೆಟ್ಟಿ ಅವರು ಕೇವಲ ಸಂಘಟಕರಷ್ಟೇ ಆಗಿರದೆ, ಅದ್ಭುತ ನಟರೂ ಆಗಿದ್ದರು. ನಾಟಕಗಳಲ್ಲಿ ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ನಗಿಸುತ್ತಿದ್ದ ಅವರು, ಗಂಭೀರ ಸಾಮಾಜಿಕ ಜವಾಬ್ದಾರಿಯ ಪಾತ್ರಗಳನ್ನು ಅಷ್ಟೇ ತನ್ಮಯತೆಯಿಂದ ನಿರ್ವಹಿಸುತ್ತಿದ್ದರು. ಇವರ ಅಭಿನಯಕ್ಕೆ ಕರಾವಳಿಯಾದ್ಯಂತ ಅಪಾರ ಅಭಿಮಾನಿ ಬಳಗವಿತ್ತು. ಕಳೆದ ಕೆಲವು ಸಮಯದಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಅಭಿನಯದಿಂದ ದೂರ ಉಳಿದಿದ್ದರು.
ಸುಜಿತ್ ಶೆಟ್ಟಿ ಪಾದೂರು ಅವರ ನಿಧನಕ್ಕೆ ರಂಗಭೂಮಿ ಗಣ್ಯರು, ಕಲಾವಿದರು ಮತ್ತು ರಾಜಕೀಯ ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ. ಕಾಪು ಮತ್ತು ಉಡುಪಿ ಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಅವರ ಸಂಘಟನಾ ಚತುರತೆಯನ್ನು ನೆನಪಿಸಿಕೊಂಡಿದ್ದಾರೆ.
ಮೃತರು ಪತ್ನಿ, ಕಾಪು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ ಮತ್ತು ಓರ್ವ ಪುತ್ರಿಯನ್ನು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





