ದಾವಣಗೆರೆ: ನಾಪತ್ತೆಯಾಗಿದ್ದ ಪ್ರೇಮಿಗಳಿಬ್ಬರು ಹರಪನಹಳ್ಳಿ ಪಟ್ಟಣದ ಹೊರವಲಯದ ಅನಂತನಹಳ್ಳಿ ಸರ್ಕಾರಿ ಐಟಿಐ ಎದುರಿಗಿರುವ ಅರಣ್ಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಜಿಟ್ಟಿನಕಟ್ಟೆ ಗ್ರಾಮದ ಮದ್ದನಸ್ವಾಮಿ(18), ಬಂಡ್ರಿ ಗ್ರಾಮದ ದೀಪಿಕಾ(18) ನೇಣಿಗೆ ಶರಣಾದ ಪ್ರೇಮಿಗಳು. ಒಂದೇ ಮರದ ಕೊಂಬೆಗೆ ಇಬ್ಬರೂ ನೇಣುಬಿಗಿದುಕೊಂಡಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ.
ಮದ್ದನಸ್ವಾಮಿ ಹಾಗೂ ದೀಪಿಕಾ ಹರಪನಹಳ್ಳಿ ಸರ್ಕಾರಿ ಪಿಯು ಕಾಲೇಜ್ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಇವರಿಬ್ಬರು ಏ.15 ಪಿಯುಸಿ ಫಲಿತಾಂಶ ಬಂದ ದಿನದಿಂದ ನಾಪತ್ತೆಯಾಗಿದ್ದರು. ಇಬ್ಬರೂ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಯಾಗಿದ್ದು, ದೀಪಿಕಾ 438 ಹಾಗೂ ಮದ್ದನಸ್ವಾಮಿ 373 ಅಂಕ ಪಡೆದಿದ್ದರು.
ಘಟನಾ ಸ್ಥಳಕ್ಕೆ ಹರಪನಹಳ್ಳಿ ಪೊಲೀಸರು ಭೇಟಿ ನೀಡಿ, ಪರಶೀಲನೆ ನಡೆಸಿದರು. ಪ್ರೇಮಿಗಳಿಬ್ಬರು ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.