ಉಡುಪಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಇಂದು 135 ಮಂದಿ ಶಾಸಕರಿದ್ದಾರೆ. ಇವರಲ್ಲಿ ಒಬ್ಬಿಬ್ಬರು ಬಹಿರಂಗ ಹೇಳಿಕೆ ಕೊಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಇದು ಸರಿಯಲ್ಲ ಎಂದು ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಕುಂದಾಪುರ ತಾಲೂಕು ಕೋಟೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಉತ್ತಮ ಆಡಳಿತಕ್ಕಾಗಿ ರಾಜ್ಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಗೆದ್ದಿರುವವರು ಇದನ್ನು ತಿಳಿದುಕೊಳ್ಳಬೇಕು. ಎಲ್ಲರೂ ಮಂತ್ರಿ, ನಿಗಮ ಅಧ್ಯಕ್ಷ ಆಗಲು ಸಾಧ್ಯವಿಲ್ಲ. ಗೆದ್ದವರು ಸ್ವಲ್ಪ ಸಮಾಧಾನದಿಂದ ಇರಬೇಕು. ಸಮಾಧಾನದಿಂದ ಇರದಿದ್ದರೆ ಮುಂದಕ್ಕೆ ಅಪಾಯ ಇದೆ ಎಂದು ಅವರು ಅತೃಪ್ತ ಶಾಸಕರಿಗೆ ಕಿವಿಮಾತು ಹೇಳಿದರು.
ಎಲ್ಲಾ ಶಾಸಕರಿಗೂ ಅನುದಾನ ಬರುತ್ತದೆ. ಆದರೆ ಸ್ವಲ್ಪ ಹೆಚ್ಚು ಕಡಿಮೆ ಆಗುತ್ತದೆ ಎಂದ ಅವರು, ರಾಜ್ಯದ ಅಭಿವೃದ್ಧಿಗೆ ಅನುದಾನ ಕೊರತೆಗೆ ಕೇಂದ್ರ ಸರಕಾರದ ಧೋರಣೆ ಕಾರಣ ಎಂದು ದೂರಿದರು. ರಾಜ್ಯದಿಂದ ನಾಲ್ಕೂವರೆ ಲಕ್ಷ ಕೋಟಿ ರೂ. ಜಿಎಸ್ಟಿ ರೂಪದಲ್ಲಿ ಕೇಂದ್ರಕ್ಕೆ ಹೋಗುತ್ತಿದೆ. ಆದರೆ ಅದರಲ್ಲಿ ಅವರು ರಾಜ್ಯಕ್ಕೆ ನೀಡುವುದು ಕೇವಲ 50,000 ಕೋಟಿ ರೂ.ಮಾತ್ರ. ಇದರಲ್ಲಿ ಅರ್ಧದಷ್ಟು ದುಡ್ಡು ಕೊಟ್ಟರೂ ನಮ್ಮ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದರು.
ಸಾರಿಗೆ ಇಲಾಖೆಯ ಕೆಎಸ್ಸಾರ್ಟಿಸಿಯಲ್ಲಿ ಚಾಲಕರ ತೀವ್ರ ಕೊರತೆ ಇತ್ತು. ಅದರಲ್ಲೂ ಪುತ್ತೂರು, ಮಂಗಳೂರು, ಚಾಮರಾಜನಗರ, ರಾಮನಗರ ವಿಭಾಗಗಳಲ್ಲಿ ಚಾಲಕರ ಅಧಿಕ ಕೊರತೆ ಇತ್ತು. ಇದೀಗ 2,000 ಚಾಲಕರ ನೇಮಕಕ್ಕೆ ಆದೇಶ ಪತ್ರ ಕೊಟ್ಟಿದ್ದೇವೆ. ಹೀಗಾಗಿ ಚಾಲಕರ ಕೊರತೆ ಗಣನೀಯವಾಗಿ ನೀಗಲಿದೆ. ಇವರಲ್ಲಿ ಮಂಗಳೂರು ವಿಭಾಗಕ್ಕೆ ಸುಮಾರು 300 ಮಂದಿ ಚಾಲಕರನ್ನು ನಿಯೋಜಿಸಿದ್ದೇವೆ. ಉಡುಪಿಗೂ ಇನ್ನೂರಕ್ಕೂ ಹೆಚ್ಚು ಚಾಲಕರ ವ್ಯವಸ್ಥೆ ಮಾಡಲಿದ್ದೇವೆ. ಹೀಗಾಗಿ ಇನ್ನು ಮುಂದೆ ಚಾಲಕರ ಕೊರತೆ ಇರೋದಿಲ್ಲ. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಲ್ಲ ಎಂದು ಸಚಿವರು ತಿಳಿಸಿದರು.
ಕೊಲ್ಲೂರಿಗೆ ಲಕ್ಷಗಟ್ಟಲೆ ಜನ ಬರುತ್ತಾರೆ. ಇಲ್ಲಿ ಮೂಲಭೂತ ಸೌಕರ್ಯಗಳು ಇರಲೇಬೇಕಾಗುತ್ತದೆ. ಕ್ಷೇತ್ರದಲ್ಲಿ ಏನೇನು ನ್ಯೂನ್ಯತೆಗಳಿವೆ ಅದನ್ನು ಸರಿ ಮಾಡುವ ಕೆಲಸ ಮಾಡಬೇಕು, ಮಾಡುತ್ತೇನೆ ಎಂದರು.
ಕ್ಷೇತ್ರದಲ್ಲಿ ಭಕ್ತರಿಂದ ಸಂಗ್ರಹವಾಗುವ ಹಣವನ್ನು ಬೇರೆ ಕಡೆಗೆ ನೀಡುವ ದೂರಿನ ಬಗ್ಗೆ ಸಚಿವರನ್ನು ಪ್ರಶ್ನಿಸಿದಾಗ, ಕ್ಷೇತ್ರದ ಹಣ ಕ್ಷೇತ್ರಕ್ಕೆ. ಬೇರೆ ದೇವಸ್ಥಾನಕ್ಕೂ ಕೊಡಲು ಸಾಧ್ಯವಿಲ್ಲ. ಆಯಾ ದೇವಸ್ಥಾನದ ಹಣ ಆಯಾ ದೇವಸ್ಥಾನದ ಅಕೌಂಟ್ನಲ್ಲಿ ಇರಬೇಕು ಎಂದರು.