ಕೇಸು ದಾಖಲು-ವಿಚಾರಣೆಗೆ ಆರು ಮಂದಿಗೆ ನೋಟೀಸ್..
ಕಡಬ ಪೋಲಿಸರಿಂದ ಕಾರ್ಯಕರ್ತರ ಟಾರ್ಗೆಟ್-ವಿ.ಹಿಂ.ಪ. ಖಂಡನೆ….
ಕಡಬ: ಮೇ.2ರಂದು ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಖಂಡಿಸಿ ವಿ.ಹಿಂ.ಪ. ಜಿಲ್ಲಾ ಬಂದ್ ಗೆ ಕರೆ ನೀಡಿದ್ದು, ಈ ಹಿನ್ನಲೆಯಲ್ಲಿ ಕಡಬದಲ್ಲಿ ನಡೆದ ರಸ್ತೆ ತಡೆ ಪ್ರತಿಭಟನೆಗೆ ಸಂಬಂಧಿಸಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರು ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಕಡಬ ಠಾಣೆಯಿಂದ ನೋಟಿಸು ನೀಡಲಾಗಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಮೋದ್ ನಂದುಗುರಿ, ದೇವಿ ಪ್ರಸಾದ್ ಮರ್ದಾಳ, ತಿಲಕ್ ರೈ ನಂದುಗುರಿ, ಮೋಹನ್ ಕೆರೆಕ್ಕೊಡಿ, ರಾಧಾಕೃಷ್ಣ ಕೋಲ್ಪೆ, ಪ್ರೇಮಚಂದ್ರ ಅಜ್ಜರಮೂಲೆ ಇವರ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೋಟೀಸ್ ನಲ್ಲಿ ಏನಿದೆ?: ಕಡಬ ಠಾಣೆಯಲ್ಲಿ ಮೇ.3ರಂದು ಪ್ರಕರಣ ದಾಖಲಾಗಿದ್ದು, ಮೇ.7ರಂದು ಕಡಬ ಠಾಣೆಗೆ ವಿಚಾರಣೆಗೆ ಹಾಜರಾಗಬೇಕು ಎಂದಿದ್ದು, ಆರೋಪಿತರಿಗೆ ಕಡಬ ಠಾಣೆಯಿಂದ ಜೂ.23ರಂದು ನೋಟಿಸು ಲಭಿಸಿದೆ, ಈಗಾಗಲೇ ಆರು ಮಂದಿ ಠಾಣೆಗೆ ತೆರಳಿ ಸಹಿ ಮಾಡಿದ್ದಾರೆ.
ಕಡಬ ಪೋಲಿಸರಿಂದ ಕಾರ್ಯಕರ್ತರ ಟಾರ್ಗೆಟ್-ಆರೋಪ ಈ ಬಗ್ಗೆ ಕಡಬ ಪ್ರಖಂಡ ವಿ.ಹಿಂ.ಪ.ಕಾರ್ಯದರ್ಶಿ ಪ್ರಮೀಳ ಲೋಕೇಶ್ ಅವರು ಹೇಳಿಕೆ ನೀಡಿ, ಪ್ರತಿಭಟನೆಯಲ್ಲಿ ಭಾಗವಹಿಸಿದ ಆರು ಮಂದಿಯನ್ನು ಟಾರ್ಗೆಟ್ ಮಾಡಲಾಗಿದೆ. ಇವರನ್ನು ಇತ್ತೀಚಿನ ಎರಡು ಘಟನೆಯಲ್ಲಿಯೂ ಕೇಸು ಹಾಕಲಾಗಿದೆ. ಈ ಘಟನೆಯಲ್ಲಿಯೂ ಅವರ ಮೇಲೆಯೇ ಕೇಸು ದಾಖಲಿಸಲಾಗಿದೆ. ಕಡಬ ಠಾಣೆಯಲ್ಲಿ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮನೋಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಕೇಸು ಹಾಕಿ ಅವರನ್ನು ಮಟ್ಟಹಾಕುವ ಕಡಬ ಪೋಲಿಸ್ ಅಧಿಕಾರಿಗಳ ಕೆಲಸ ಫಲ ನೀಡುವುದಿಲ್ಲ, ಕಾರ್ಯಕರ್ತರ ಜತೆ ಅಸಂಖ್ಯಾತ ಹಿಂದೂ ಸಮಾಜ ಇದೆ, ನಾವು ಒಗ್ಗಟ್ಟಿನಿಂದ ಮುಂದೆಯೂ ಹೋರಾಟ ನಡೆಸುತ್ತೇವೆ, ಪೋಲಿಸರ ಈ ನಡೆಯನ್ನು ನಾವು ಖಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.