Home Crime “ತಲ್ವಾರ್ ಹಿಡಿದ ಬೈಕ್ ಸವಾರರ ಫೋಟೊ ಮತ್ತು ವಾಯ್ಸ್ ಕ್ಲಿಪ್” ಬಗ್ಗೆ ಪ್ರಕರಣ…!!

“ತಲ್ವಾರ್ ಹಿಡಿದ ಬೈಕ್ ಸವಾರರ ಫೋಟೊ ಮತ್ತು ವಾಯ್ಸ್ ಕ್ಲಿಪ್” ಬಗ್ಗೆ ಪ್ರಕರಣ…!!

ಮಂಗಳೂರು : ನಗರದ ಬಜ್ಪೆ ಸಮೀಪ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ “ತಲ್ವಾರ್ ಹಿಡಿದ ಬೈಕ್ ಸವಾರರ ಫೋಟೊ ಮತ್ತು ವಾಯ್ಸ್ ಕ್ಲಿಪ್” ಬಗ್ಗೆ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೂರಲ್ಪಾಡಿ ನಿವಾಸಿ ಮುಹಮ್ಮದ್‌ ಸುಹೈಲ್‌ ಎಂಬವರು ಈ ಕುರಿತು ದೂರು ನೀಡಿದ್ದಾರೆ.

“ನಾನು ಬೈಕ್‌ ನಲ್ಲಿ ಸ್ನೇಹಿತನೊಂದಿಗೆ ಮೂಡುಬಿದಿರೆಗೆ ಹೋಗುತ್ತಿದ್ದ ಸಂದರ್ಭ ಆಕ್ವೇರಿಯಂ ಕಲ್ಲು ಮತ್ತು ಇ-ಸಿಗರೇಟ್ ಹಿಡಿದುಕೊಂಡಿದ್ದನ್ನು ಯಾರೋ ದುಷ್ಕರ್ಮಿಗಳು ಫೋಟೊ ತೆಗೆದು ʼತಲ್ವಾರ್ ಹಿಡಿದ ಬೈಕ್ ಸವಾರರುʼ ಎಂದು ಫೋಟೊ ಮತ್ತು ವಾಯ್ಸ್ ಕ್ಲಿಪ್‌ನ್ನು ʼಕರಾವಳಿ ಟೈಗರ್ಸ್‌ʼ ಎಂಬ ಇನ್ಸ್ಟಾಗ್ರಾಂ ಪೇಜ್‌ ನಲ್ಲಿ ಸುಳ್ಳುಸುದ್ದಿ ಹರಡಿದ್ದಾರೆ. ಬೈಕ್‌ನಲ್ಲಿ ಶಸ್ತ್ರಾಸ್ತ ಹಿಡಿದುಕೊಂಡು ಸಂಚರಿಸುತ್ತಿರುವುದಾಗಿ ನನ್ನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿ ಕೋಮು ಪ್ರಚೋದನೆ ನೀಡಿರುವ “ಕರಾವಳಿ ಟೈಗರ್ಸ್‌” ಇನ್ಸ್ಟಾಗ್ರಾಂ ಖಾತೆಯ ಮೇಲೆ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿರುವ ಮಂಗಳೂರು ನಗರ ಪೊಲೀಸರು, ವಾಟ್ಸಪ್‌ನಲ್ಲಿ ಹರಿದಾಡಿದ ತಲ್ವಾರ್ ಹಿಡಿದ ಬೈಕ್ ಸವಾರರ ಫೋಟೊ ಮತ್ತು ವಾಯ್ಸ್ ಕ್ಲಿಪ್ ತಪ್ಪು ಮಾಹಿತಿಯಾಗಿದೆ. ಇಬ್ಬರು ಯುವಕರು ಮೂಡಬಿದ್ರೆಗೆ ಹೋಗುತ್ತಿದ್ದಾಗ ಹಿಂಬದಿಯ ಸವಾರ ತನ್ನ ಕೈಯಲ್ಲಿ ಆಕ್ವೇರಿಯಂ ಕಲ್ಲು ಮತ್ತು ಇ-ಸಿಗರೇಟ್ ಹಿಡಿದುಕೊಂಡಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.