Home Crime ಮಂಗಳೂರು: ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿ ವಂಚನೆ ಪ್ರಕರಣ : ಆರೋಪಿಗೆ ಶಿಕ್ಷೆ ಪ್ರಕಟ…!!

ಮಂಗಳೂರು: ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿ ವಂಚನೆ ಪ್ರಕರಣ : ಆರೋಪಿಗೆ ಶಿಕ್ಷೆ ಪ್ರಕಟ…!!

ಮಂಗಳೂರು: ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿ ಹಣ ಪಡೆದ ಬಳಿಕ ಮನೆಯನ್ನೂ ನಿರ್ಮಿಸದೆ, ಹಣವನ್ನೂ ವಾಪಸ್ ಕೊಡದೆ, ಹಣದ ಕುರಿತು ಪ್ರಶ್ನಿಸಿದಾಗ ಜಾತಿ ನಿಂದನೆ ಮಾಡಿದ ಪ್ರಕರಣ ಸಂಬಂಧ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯವು ಶಿಕ್ಷೆ, ದಂಡ ವಿಧಿಸಿ ತೀರ್ಪು ನೀಡಿದೆ.

ಶಿಕ್ಷೆಗೊಳಗಾದ ಆರೋಪಿ ಸಿಪ್ರಿಯಾನ್ ಡಿಸೋಜ ಎಂದು ತಿಳಿದು ಬಂದಿದೆ.

ಜಯಂತ್ ನಾಯ್ಕ ಮನೋಜ್, ವಾಸುದೇವ ಎಂಬವರಿಗೆ 1250 ಚದರ ಅಡಿಯ ಮನೆ ಕಟ್ಟಿಸಿ ಕೊಡುವುದಾಗಿ ತಿಳಿಸಿದ ಸಿಪ್ರಿಯಾನ್ ಡಿಸೋಜ ಜಾಗ ಮತ್ತು ಮನೆಗೆ 30 ಲಕ್ಷ ರೂ. ನಿಗದಿಪಡಿಸಿದ್ದ. ಹಾಗೆಯೇ 2017ರ ಜೂ.28ರಂದು ಕರಾರು ಪತ್ರ ಮಾಡಿಸಿಕೊಂಡು ಒಂದು ವರ್ಷದೊಳಗೆ ಮನೆ ನಿರ್ಮಿಸಿಕೊಡುವುದಾಗಿ ಮೂವರಿಗೆ ಭರವಸೆ ನೀಡಿ ಮುಂಗಡ ಪಡೆದಿದ್ದ. ಆದರೆ ಒಂದು ವರ್ಷದೊಳಗೆ ಮನೆ ನಿರ್ಮಿಸದ ಕಾರಣ ಮೂವರು ವಿಚಾರಿಸಿದಾಗ ಮುಂಗಡ ವಾಪಸ್ ಕೊಡುವುದಾಗಿ ಹೇಳಿದ್ದರೂ ಹಣ ವಾಪಸ್ ಕೊಟ್ಟಿರಲಿಲ್ಲ ಎಂದು ದೂರಲಾಗಿತ್ತು.

2021ರ ಜ.20ರಂದು ಪುತ್ತಿಗೆ ಗ್ರಾಮದ ಮಿತ್ತಬೈಲಿನ ಸಿಪ್ರಿಯಾನ್ ಡಿಸೋಜನ ಮನೆಗೆ ಮೂವರು ಹೋಗಿ ಕೇಳಿದಾಗ ಕೋಪಗೊಂಡ ಸಿಪ್ರಿಯಾನ್ ಡಿಸೋಜ ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ ಮಾಡಿ ಬೈದಿದ್ದ.

ಈ ಕುರಿತು ಮೂಡುಬಿದಿರೆ ಠಾಣೆಯಲ್ಲಿ ಐಪಿಸಿ ಮತ್ತು ಎಸ್ಸಿ-ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಂದಿನ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಎಸ್‌. ಮಹೇಶ್ ಕುಮಾರ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ 19 ಸಾಕ್ಷಿದಾರರ ಪೈಕಿ 13 ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿದ್ದು, ಮಂಗಳೂರಿನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯದ ನ್ಯಾಯಾಧೀಶ ಜಗದೀಶ ವಿ.ಎನ್. 15,60,000 ರೂ. ದಂಡ ಪಾವತಿಸಬೇಕು. ಇಲ್ಲದಿದ್ದರೆ 3 ವರ್ಷಗಳ ಸಾದಾ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದ್ದಾರೆ.

ದಂಡದ ಮೊತ್ತದಲ್ಲಿ ತಲಾ 6 ಲಕ್ಷ ರೂ.ವನ್ನು ಜಯಂತ್ ಬಿ. ನಾಯ್ಕ ಮತ್ತು ಮನೋಜ್ ಹಾಗೂ 3.50 ಲಕ್ಷ ರೂ.ವನ್ನು ವಾಸುದೇವರಿಗೆ ನೀಡಲು ತಿಳಿಸಲಾಗಿದೆ. ಉಳಿದ 10,000 ರೂ.ವನ್ನು ಸರ್ಕಾರಕ್ಕೆ ಪಾವತಿಸಲು ನಿರ್ದೇಶಿಸಲಾಗಿದೆ.

ಆರೋಪಿ ಸಿಪ್ರಿಯಾನ್ ಡಿಸೋಜ ದಂಡ ಪಾವತಿಸಲು ಸೆ.30ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ.