ಕುಂದಾಪುರ: ಇತ್ತೀಚೆಗೆ ವಿವಾಹವಾಗಿರುವ ಬಿಗ್ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಬಗ್ಗೆ ಅವರ ತಂದೆ ಬಾಲಕೃಷ್ಣ ನಾಯ್ಕ್ ಅವರು ಗಂಭೀರವಾದ ಸರಣಿ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ಚೈತ್ರಾ ಅವರು ಶ್ರೀಕಾಂತ್ ಕಶ್ಯಪ್ ಎನ್ನುವವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಪ್ತರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಚೈತ್ರಾ ಕಾಲಿಟ್ಟಿದ್ದಾರೆ. ನೂತನ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ಅವರ ತಂದೆ ಗಂಭೀರವಾದ ಆರೋಪಗಳನ್ನು ಮಾಡಿರುವುದು ಸದ್ದು ಮಾಡಿದೆ.
ಮಾಧ್ಯಮಗಳ ಜತೆ ಮಾತನಾಡಿರುವ ಚೈತ್ರಾ ತಂದೆ ಬಾಲಕೃಷ್ಣ ನಾಯ್ಕ್, “ನನ್ನ ಮಗಳು ವಿವಾಹಕ್ಕೆ ನನಗೆ ಸರಿಯಾದ ಆಮಂತ್ರಣ ಕೊಟ್ಟಿಲ್ಲ. ಮಗಳ ಮದುವೆಯನ್ನು ನಾನು ಒಪ್ಪಲಾರೆ. ಚೈತ್ರಾ ಹಾಗೂ ಆಕೆಯ ಪತಿ ಇಬ್ಬರೂ ಕಳ್ಳರು” ಎಂದಿದ್ದಾರೆ.
ನನ್ನ ಪತ್ನಿ ಕೂಡ ಮಗಳ ಬೆಂಬಲಕ್ಕೆ ನಿಂತಿದ್ದಾಳೆ. ಇವರು ಹಣದ ಆಸೆಗೆ ನನ್ನನ್ನು ದೂರವಿಟ್ಟಿದ್ದಾರೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲಿ ಇವರು ಹಣ ಹಂಚಿಕೊಂಡಿದ್ದಾರೆ. ನನಗೆ ನನ್ನ ದೊಡ್ಡ ಮಗಳು ಮಾತ್ರ ಆಸರೆ ಎಂದಿದ್ದಾರೆ.
ಚೈತ್ರಾ ಮದುವೆ ಸಂದರ್ಭ ಆಕೆ ನನ್ನಲ್ಲಿ ಹಣ ಕೇಳಿದಳು. ನಾನು ಹೋಟೆಲ್ನಲ್ಲಿ ಕೆಲಸ ಮಾಡುವ ಸಾಮಾನ್ಯ ನೌಕರ. ಚೈತ್ರಾ ಮತ್ತು ಆಕೆಯ ತಾಯಿ ಹಣಕ್ಕಾಗಿ ನನ್ನನ್ನು ದೂರವಿಟ್ಟಿದ್ದಾರೆ. ಚೈತ್ರ ಪತಿ ನಮ್ಮ ಮನೆಯಲ್ಲಿ ಇದ್ದವನು. ಅವನು ಕೂಡ ಕಳ್ಳ. ಅವರಿಗೆ ಮಾನ ಮರ್ಯಾದೆ ಇಲ್ಲ. ಈಗ ನನ್ನ ಕುಟುಂಬದ ಮಾನ ಮರ್ಯಾದೆ ಕೂಡ ತೆಗೆದರು ಎಂದಿದ್ದಾರೆ.
ಚೈತ್ರಾ ತಂದೆಯ ಆರೋಪಗಳು ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ಈ ಕುರಿತು ಚೈತ್ರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ ಎಂದು ಬರೆದುಕೊಂಡಿದ್ದಾರೆ.