ಕುಂದಾಪುರ: ರಸ್ತೆಗೆ ನಾಯಿ ಅಡ್ಡಬಂದ ಪರಿಣಾಮ ಸ್ಕೂಟರ್ ಸವಾರ ನಿಯಂತ್ರಣ ಕಳೆದುಕೊಂಡು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ.
ದಿನಾಂಕ 28/08/2026 ರಂದು ರಾತ್ರಿ 08:40 ರ ಸುಮಾರಿಗೆ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದ NH-66 ರಲ್ಲಿ ಈ ಅಪಘಾತ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿ ರಾಘವೇಂದ್ರ ಎಂದು ತಿಳಿದು ಬಂದಿದೆ.
ತಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಸ್ಕೂಟರ್ ನಂ KA20 HJ8098 ನಲ್ಲಿ ಬರುತ್ತಿದ್ದ ರಾಘವೇಂದ್ರ ಅವರು ತಲ್ಲೂರು ಗ್ರಾಮದ ಶ್ರೀ ದುರ್ಗಾ ಆಟೋ ಡೀಸೆಲ್ ವರ್ಕ್ಸ್ ಎದುರು ತಲುಪಿದಾಗ ರಸ್ತೆಗೆ ಒಂದು ನಾಯಿ ಅಡ್ಡಬಂದಿದೆ.
ನಾಯಿಯನ್ನು ತಪ್ಪಿಸಲು ಸ್ಕೂಟರ್ಗೆ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಾಘವೇಂದ್ರ ಅವರು ರಸ್ತೆಗೆ ಬಿದ್ದಿದ್ದಾರೆ.
ಅಪಘಾತದಲ್ಲಿ ಅವರ ಮುಖದ ಭಾಗದಲ್ಲಿ ರಕ್ತಗಾಯವಾಗಿದ್ದು, ಹೊಟ್ಟೆ ಹಾಗೂ ಕೈಕಾಲುಗಳಲ್ಲಿ ತರಚಿದ ಗಾಯಗಳಾಗಿದ್ದವು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ದೀಪಕ್ ಕುಮಾರ್ ಮತ್ತು ರಾಮಚಂದ್ರ ಖಾರ್ವಿ ಅವರು ಕೂಡಲೇ ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲಿಸಿದರು.
ನಂತರ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ರಾಘವೇಂದ್ರ ಅವರು ಮೃತಪಟ್ಟಿದ್ದಾರೆ.
ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 69/2026 ಕಲಂ 281, 106(1) BNSರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



