ಉಡುಪಿ : ಕಲ್ಯಾಣಪುರದಲ್ಲಿ ಇರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಭ್ರಾಮರೀ ನಾಟ್ಯಾಲಯ (ರಿ.), ಅಮ್ಮುಂಜೆ, ಉಡುಪಿ ಇವರ ರಜತ ವರ್ಷಾಚರಣೆ ಹಾಗೂ “ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ – 13” ಕಾರ್ಯಕ್ರಮದ ಅಂಗವಾಗಿ “ನೃತ್ಯ ಪರಂಪರೆ” ಎಂಬ ಶೀರ್ಷಿಕೆಯಡಿ ಭರತನಾಟ್ಯ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವು ಸಂಸ್ಕೃತಿ, ಆರೋಗ್ಯ ಮತ್ತು ಶಿಕ್ಷಣ ಎಂಬ ಆಶಯಗಳನ್ನು ಒಳಗೊಂಡಿತ್ತು. ಭರತನಾಟ್ಯದ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಯುವಜನರಿಗೆ ಪರಿಚಯಿಸುವುದು ಹಾಗೂ ಕಲೆಯ ಮಹತ್ವವನ್ನು ತಿಳಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಕಾರ್ಯಕ್ರಮವನ್ನು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿ ಮಾತನಾಡಿದ ತ್ರಿಶಾ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಜೋಯೆಲ್ ಮನೋಜ್ ಫೆರ್ನಾಂಡಿಸ್ ಅವರು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನೃತ್ಯವು ಕೇವಲ ಮನರಂಜನೆಯ ಕಲೆಯಲ್ಲ. ಅದು ಭಾವ, ರಸ, ಲಯ, ತಾಳ, ಅಭಿನಯ ಮತ್ತು ಸಂಸ್ಕೃತಿಯ ಸುಂದರ ಸಂಗಮ. ನೃತ್ಯದ ಪ್ರತಿಯೊಂದು ಹೆಜ್ಜೆಯ ಹಿಂದೆ ಪರಿಶ್ರಮವಿದೆ; ಪ್ರತಿಯೊಂದು ಭಾವದ ಹಿಂದೆ ಭಾವನೆಯಿದೆ; ಪ್ರತಿಯೊಂದು ತಾಳದ ಹಿಂದೆ ನಿರಂತರ ಸಾಧನೆಯಿದೆ.
ನಮ್ಮ ದೇಶದ ಶಾಸ್ತ್ರೀಯ ನೃತ್ಯಕಲೆಗಳು ಗುರು–ಶಿಷ್ಯ ಪರಂಪರೆಯ ಮೂಲಕ ತಲೆತಲಾಂತರಗಳಿಂದ ಉಳಿದು ಬೆಳೆದು ಬಂದಿವೆ. ಇಂದಿನ ಮಕ್ಕಳು ಈ ಪರಂಪರೆಯನ್ನು ಕಲಿತು, ಅಭ್ಯಾಸ ಮಾಡಿ, ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಹೇಳಿದರು. ಈ ಸಂಧರ್ಭದಲ್ಲಿ ಕನ್ನಡ ಉಪನ್ಯಾಸಕರಾದ ಆದರ್ಶ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭ್ರಾಮರೀ ನಾಟ್ಯಾಲಯದ ಗುರು ವಿದ್ವಾನ್ ಕೆ. ಭವಾನಿ ಶಂಕರ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಪ್ರಾತ್ಯಕ್ಷಿಕೆ ನಡೆಯಿತು.
ಪ್ರಾತ್ಯಕ್ಷಿಕೆಯಲ್ಲಿ ವಿದುಷಿಯರಾದ ಶಿಫಾಲಿ, ಕಾತ್ಯಾಯಿನಿ ,ಯಶಸ್ವಿ, ಸ್ವಾತಿ, ಸಾತ್ವಿಕ್ ಸಂಯುಕ್ತ ಹಾಗೂ ಪ್ರಜ್ವಲ್ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಹಿನ್ನೆಲೆಯಲ್ಲಿ ಆದಿತ್ಯ ಆಚಾರ್ಯ ಸಹಕರಿಸಿದರು ಶಾಸ್ತ್ರೀಯ ನೃತ್ಯದ ಭಂಗಿ, ಹಸ್ತಮುದ್ರೆ, ಭಾವಾಭಿನಯ, ಲಯ ಮತ್ತು ತಾಳಗಳ ಸುಂದರ ಸಂಯೋಜನೆಯನ್ನು ವಿದ್ಯಾರ್ಥಿಗಳು ಆಸಕ್ತಿಯಿಂದ ವೀಕ್ಷಿಸಿದರು.
ಕಾರ್ಯಕ್ರಮವು ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆಯ ಸೌಂದರ್ಯ ಮತ್ತು ವೈಶಿಷ್ಟ್ಯವನ್ನು ಮನೋಜ್ಞವಾಗಿ ಪರಿಚಯಿಸಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ನಾಟ್ಯಾಲಯದ ಕಲಾವಿದರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು. ಭರತನಾಟ್ಯದ ಮೂಲಕ ನಮ್ಮ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಅಗತ್ಯವನ್ನು ಕಾರ್ಯಕ್ರಮವು ಸಾರಿತು.
ಒಟ್ಟಾರೆಯಾಗಿ, “ನೃತ್ಯ ಪರಂಪರೆ” ಭರತನಾಟ್ಯ ಪ್ರಾತ್ಯಕ್ಷಿಕೆ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ನೆರವೇರಿತು. ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಶಾಸ್ತ್ರೀಯ ಕಲೆಯ ಬಗ್ಗೆ ಆಸಕ್ತಿ ಮತ್ತು ಗೌರವವನ್ನು ಬೆಳೆಸುವಲ್ಲಿ ಕಾರ್ಯಕ್ರಮವು ಮಹತ್ವದ ಪಾತ್ರ ವಹಿಸಿತು.









