Home Crime ಬ್ಯಾಂಕ್ ಸಾಲದ ಒತ್ತಡದಿಂದ ವ್ಯಕ್ತಿ ಆತ್ಮಹತ್ಯೆ

ಬ್ಯಾಂಕ್ ಸಾಲದ ಒತ್ತಡದಿಂದ ವ್ಯಕ್ತಿ ಆತ್ಮಹತ್ಯೆ

ಶಂಕರನಾರಾಯಣ: ಭಾಸ್ಕರ್‌ ಶೆಟ್ಟಿ (48) ಅವರು ಬ್ಯಾಂಕಿನಲ್ಲಿ ಮಾಡಿದ್ದ ಸಾಲವನ್ನು ತೀರಿಸಲಾಗದೆ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜೂನ್ 17ರಂದು ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಹೊರಟ ಭಾಸ್ಕರ್‌ ಶೆಟ್ಟಿ ಅವರು ತಮ್ಮ ಹಳೆ ಮನೆಗೆ ಹೋಗಿ ಬರುತ್ತೇನೆ ಎಂದು ಪತ್ನಿ ಆಶಾ ಅವರಿಗೆ ತಿಳಿಸಿದ್ದರು. ಬೆಳಿಗ್ಗೆ 10 ಗಂಟೆಯಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಆಶಾ ಅವರು ಹಳೆ ಮನೆಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯ ಎದುರು ಭಾಗದಲ್ಲಿ ಭಾಸ್ಕರ್‌ ಶೆಟ್ಟಿ ಅವರ ಚಪ್ಪಲಿ ಕಂಡುಬಂದಿದ್ದು, ಬಾಗಿಲು ತೆರೆಯದ ಕಾರಣ ಮನೆಯ ಹಿಂಭಾಗದ ಕಿಟಕಿಯಿಂದ ನೋಡಿದಾಗ ಅವರು ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

ಬ್ಯಾಂಕ್ ಸಾಲದ ಸಮಸ್ಯೆಯಿಂದ ಮಾನಸಿಕವಾಗಿ ನೊಂದಿದ್ದ ಭಾಸ್ಕರ್‌ ಶೆಟ್ಟಿ ಅವರು ಬೆಳಿಗ್ಗೆ 8 ರಿಂದ 10 ಗಂಟೆಯ ನಡುವಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಯುಡಿಆರ್‌ ಸಂಖ್ಯೆ 15/2026, ಕಲಂ 194 ಬಿಎನ್‌ಎಸ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.