Home Crime ಮಲ್ಪೆ ಬಂದರಿನಲ್ಲಿ ಉದ್ಯಮಿ ಹರೀಶ್ ಪೂಜಾರಿ ಮೇಲೆ ಹಲ್ಲೆ : ಪರಸ್ಪರ ದೂರು ದಾಖಲು…!!

ಮಲ್ಪೆ ಬಂದರಿನಲ್ಲಿ ಉದ್ಯಮಿ ಹರೀಶ್ ಪೂಜಾರಿ ಮೇಲೆ ಹಲ್ಲೆ : ಪರಸ್ಪರ ದೂರು ದಾಖಲು…!!

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ವ್ಯವಹಾರಕ್ಕೆ ಸಂಬಂಧಿಸಿದ ಹಣಕಾಸು ವಿಚಾರದಲ್ಲಿ ಉಂಟಾದ ಗಲಾಟೆ ಹಿನ್ನೆಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರುಗಳು ದಾಖಲಾಗಿವೆ.

ಉದ್ಯಮಿ ಹರೀಶ್‌ ಪೂಜಾರಿ ನೀಡಿದ ದೂರಿನ ಪ್ರಕಾರ, ಜಯೇಶ್‌ ಕೋಟ್ಯಾನ್‌ ಅವರು ಹಣ ನೀಡಲು ಬಾಕಿ ಇಟ್ಟುಕೊಂಡಿದ್ದರೆಂದು ಹೇಳಲಾಗಿದೆ. ಏಪ್ರಿಲ್‌ 30ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಕೊಡವೂರು ಗ್ರಾಮದ ಮಲ್ಪೆ ಬಂದರಿನ ಆಕ್ಷನ್‌ ದಕ್ಕೆಯಲ್ಲಿ ಹರೀಶ್‌ ಇದ್ದ ವೇಳೆ, ಜಯೇಶ್‌ ಕೋಟ್ಯಾನ್‌ ಅವರ ತಾಯಿ ಭಾರತಿ ಕೋಟ್ಯಾನ್‌, ಉದಯ ಪೂಜಾರಿ ಅಲಿಯಾಸ್‌ ಕೋರಿ ಉದಯ, ಶೇಕು ಕಟಪಾಡಿ ಹಾಗೂ ಪರುಶೋತ್ತಮ ಎಂಬವರು ಕಾರಿನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆ ವೇಳೆ ಕುತ್ತಿಗೆ ಹಿಡಿದು ರಸ್ತೆಗೆ ದೂಡಲಾಗಿದ್ದು, ಜಯೇಶ್‌ ಕೋಟ್ಯಾನ್‌ ಅವರು ಎದೆ ಹಾಗೂ ಮರ್ಮಾಂಗಕ್ಕೆ ತುಳಿದಿದ್ದು, ಬಳಿಕ ಚಾಕು ಹಿಡಿದು ಚುಚ್ಚಲು ಯತ್ನಿಸಿದ್ದಾರೆ ಎಂದು ಹರೀಶ್‌ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರು ಹರೀಶ್‌ ಅವರನ್ನು ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲೂ ವೈರಲ್‌ ಆಗಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲ್ಪೆ ಎಸ್ ಐ ಅನಿಲ್ ಅವರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.

ಇನ್ನೊಂದೆಡೆ, ಜಯೇಶ್‌ ಕೋಟ್ಯಾನ್‌ ಅವರ ತಾಯಿ ಭಾರತಿ ಕೋಟ್ಯಾನ್‌ ಕೂಡ ಹರೀಶ್‌ ವಿರುದ್ಧ ದೂರು ನೀಡಿದ್ದು, ಮಲ್ಪೆ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಎರಡೂ ಪ್ರಕರಣಗಳ ಕುರಿತು ಮಲ್ಪೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.