Home Latest ಉಡುಪಿ: ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಿವೃತ್ತ ಯೋಧನಿಗೆ ಟೋಲ್ ವಿನಾಯಿತಿ ನಿರಾಕರಣೆ…!!

ಉಡುಪಿ: ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಿವೃತ್ತ ಯೋಧನಿಗೆ ಟೋಲ್ ವಿನಾಯಿತಿ ನಿರಾಕರಣೆ…!!

ಉಡುಪಿ : ದೇಶ ಸೇವೆ ವೇಳೆ ಅಂಗವೈಖಲ್ಯಕ್ಕೆ ಒಳಗಾದ ಯೋಧ ಶ್ಯಾಮರಾಜ್ ಅವರಿಗೆ ಉಡುಪಿಯ ಸಾಸ್ತಾನ ಟೋಲ್‌ನಲ್ಲಿ ವಿನಾಯಿತಿ ಇದ್ದರೂ ಶುಲ್ಕಕ್ಕಾಗಿ ಪೀಡಿಸಿ ಅವಮಾನಿಸಲಾಗಿದೆ. ಈ ಘಟನೆಯ ಕುರಿತು ಯೋಧರು ಹಂಚಿಕೊಂಡ ನೋವಿನ ವೀಡಿಯೋ ವೈರಲ್ ಆಗಿದ್ದು, ಟೋಲ್ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹೌದು ದೇಶ ಸೇವೆಗಾಗಿಯೇ ತಮ್ಮನ್ನು ತಾವು ಅರ್ಪಿಸಿಕೊಂಡು ಶಾಶ್ವತವಾಗಿ ಅಂಗವೈಖಲ್ಯಕ್ಕೆ ಒಳಗಾದ ಯೋಧರೊಬ್ಬರಿಗೆ ಉಡುಪಿಯ ಸಾಸ್ತಾನದ ಟೋಲ್ ಪ್ಲಾಜಾದಲ್ಲಿ ಟೋಲ್ ಸಿಬ್ಬಂದಿ ಅವಮಾನಿಸಿದ್ದಾರೆ.

ಆ ಯೋಧರಿಗೆ ಟೋಲ್‌ನಿಂದ ವಿನಾಯಿತಿ ಇದ್ದರೂ ಕೂಡ ಟೋಲ್ ಪಾವತಿ ಮಾಡುವಂತೆ ಪೀಡಿಸಿ ಅವರನ್ನು ಹೋಗಲು ಬಿಡದೇ ಉಡುಪಿಯ ಸಾಸ್ತಾನದ ಟೋಲ್ ಸಿಬ್ಬಂದಿ ಕಾಯಿಸಿ ಅವಮಾನಿಸಿದ್ದಾರೆ.

ಇದರಿಂದ ನೊಂದ ಆ ಯೋಧರು ವೀಡಿಯೋ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದ್ದು, ಟೋಲ್ ಸಿಬ್ಬಂದಿಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

21 ಪ್ಯಾರಾ ಮಿಲಿಟರಿಯಲ್ಲಿ ಆರ್ಮಿ ಕಮಾಂಡೋ ಆಗಿ ಕೆಲಸ ಮಾಡಿದ್ದ ಶ್ಯಾಮರಾಜ್ ಎಂಬುವವರಿಗೆ ಸಾಸ್ತಾನದ ಟೋಲ್‌ನಲ್ಲಿ ಅವರಿಗೆ ಟೋಲ್‌ನಿಂದ ವಿನಾಯಿತಿ ಇದ್ದರೂ ಅಲ್ಲಿನ ಸಿಬ್ಬಂದಿ ಟೋಲ್ ಕಟ್ಟುವಂತೆ ಕೇಳಿ ಕಿರಿಕಿರಿ ಮಾಡಿ ಅವಮಾನಿಸಿದ್ದಾರೆ.

ವೈರಲ್ ಆದ ವೀಡಿಯೋದಲ್ಲಿ ಆ ಯೋಧರು ತಮ್ಮ ಕಾರಿನಿಂದ ಇಳಿದು ಟೋಲ್‌ನಲ್ಲಿ ತಮ್ಮ ವ್ಹೀಲ್‌ಚೇರ್‌ನಲ್ಲಿ ಕುಳಿತಿದ್ದು, ಅವರ ಕಾರನ್ನು ಪಕ್ಕಕ್ಕೆ ಇರಿಸಲಾಗಿದೆ. ಈ ಬಗ್ಗೆ ನೋವಿನಿಂದ ಮಾತನಾಡಿದ ಯೋಧ ಶ್ಯಾಮರಾಜ್ ಅವರು ಅಲ್ಲಿ ಏನು ನಡೆಯಿತು ಎಂಬುದನ್ನು ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿ ಮಾತನಾಡಿದ ಅವರು ನಾನು ಆರ್ಮಿ ಕಮಾಂಡೋ ಶ್ಯಾಮರಾಜ್, 21 ಪ್ಯಾರಾದಲ್ಲಿ ಕೆಲಸ ಮಾಡಿದ್ದೇನೆ. ಇಂದು ಕರ್ನಾಟಕದ ಉಡುಪಿಯ ಬಳಿ ಇರುವ ಸಾಸ್ತಾನದ ಟೋಲ್‌ನಲ್ಲಿ ನನಗೆ ಟೋಲ್ ಹಣ ಪಾವತಿಸುವಂತೆ ಪೀಡಿಸುತ್ತಿದ್ದಾರೆ. ಟೋಲ್ ವಿನಾಯಿತಿಗೆ ಸಂಬಂಧಿಸಿದಂತೆ ನನ್ನ ಬಳಿ ಎಲ್ಲಾ ದಾಖಲೆಗಳಿವೆ. ‘ನಾನು ಅಪರೇಷನ್ ಪರಾಕ್ರಮ್‌’ ಯುದ್ಧ ಸಂತ್ರಸ್ತನಾಗಿದ್ದೇನೆ. ನನ್ನ ಪತ್ನಿಗೆ ಆರ್‌ಎಂಎ ಪ್ರಕಾರ ಪೋಸ್ಟಿಂಗ್ ಆಗಿದ್ದು, ಗಾಡಿಯೊಂದಿಗೆ ಹೋಗುತ್ತಿದ್ದೇನೆ. ಪ್ರತಿ ಟೋಲ್‌ನಲ್ಲಿ ನಾನು ಯಾವುದೇ ಶುಲ್ಕ ಪಾವತಿ ಮಾಡದೇ ಪಾಸಾಗಿ ಬಂದಿದ್ದೇನೆ. ಆದರೆ ಉಡುಪಿಯ ಸಾಸ್ತಾನದ ಟೋಲ್‌ನಲ್ಲಿ ಮಾತ್ರ ಅವರು ಹಣ ಕೊಡದ ವಿನಹಃ ಗಾಡಿಯನ್ನ ಮುಂದೆ ಹೋಗುವುದಕ್ಕೆ ಬಿಡುವುದಿಲ್ಲ ಎಂದು ಇಲ್ಲಿ ಟೋಲ್ ಸಿಬ್ಬಂದಿಯಾದ ಶಿವರಾಮ್ ಹಾಗೂ ಸುರೇಶ್ ಎಂಬುವವರು ಹೇಳುತ್ತಿದ್ದಾರೆ.

ಇಂದು ಜನವರಿ 25, ನಾಳೆ ಗಣರಾಜ್ಯೋತ್ಸವ(ಇಂದು ಗಣರಾಜ್ಯೋತ್ಸ ಇದು ನಿನ್ನೆ ನಡೆದ ಘಟನೆ) ಹಾಗಿದ್ದರೆ ನಾನು ಈ ವ್ಹೀಲ್‌ಚೇರ್‌ನಲ್ಲಿ ಏಕೆ ಕುಳಿತಿದ್ದೇನೆ ಎಂದು ನೀವೇ ಹೇಳಿ. ನಾನು ವ್ಹೀಲ್‌ಚೇರ್‌ನಲ್ಲಿ ಕುಳಿತಿರುವುದಕ್ಕೆ ಏನಾದರು ಅರ್ಥ ಇದೆಯೇ? ಒಬ್ಬರು ಯುದ್ಧ ಸಂತ್ರಸ್ತರನ್ನು ಆರ್ಮಿ ಕಾಯ್ದೆಯ ನಿಯಮಗಳಡಿ ಟ್ಯಾಕ್ಸ್ ಫ್ರೀ ಇದ್ದರೂ ಕೂಡ ಇಲ್ಲಿ ಟೋಲ್ ಕೇಳಲಾಗುತ್ತಿದೆ. ನಿತಿನ್ ಗಡ್ಕರಿಯವರೇ (ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವರಾಗಿರುವ ನಿತಿನ್ ಗಡ್ಕರಿ) ನೀವೇ ಹೇಳಿ ಎಂದು ಆ ಯೋಧ ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಟೋಲ್ ಸಿಬ್ಬಂದಿ ನಮಗೆ ಗೊತ್ತಿರಲಿಲ್ಲ, ನಾವು ಮೇಲಿನವರ ಆದೇಶದ ಪ್ರಕಾರ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ನಿಮ್ಮ ಮನೆಯಲ್ಲಿ ಯಾರಾದರೂ ಯೋಧರಿದ್ದರೆ ನಮ್ಮ ನೋವು ಏನು ಎಂದು ನಿಮಗೆ ಗೊತ್ತಾಗುತ್ತದೆ. ನಾವು ವ್ಹೀಲ್‌ಚೇರ್‌ನಲ್ಲಿ ಸುಮ್ಮನೇ ಕುಳಿತಿದ್ದು ಅಲ್ಲ ಅಣ್ಣ ಎಂದು ಆ ಯೋಧ ಶ್ಯಾಮರಾಜ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಟೋಲ್ ಸಿಬ್ಬಂದಿ ಕ್ಷಮಿಸಿ ಬಿಡಿ ಎಂದು ಹೇಳಿದ್ದಾರೆ. ಈ ವೀಡಿಯೋ ಈಗ ಭಾರಿ ವೈರಲ್ ಆಗುತ್ತಿದ್ದು, ಟೋಲ್ ಸಿಬ್ಬಂದಿ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.