ಉಡುಪಿ: ಕಾರ್ಕಳ ಹಾಗೂ ಕಾಪು ತಾಲೂಕಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ, ಸಾಗಾಟ ಮತ್ತು ಪರವಾನಗಿ ಇಲ್ಲದೆ ಕ್ರಷರ್ ನಡೆಸುತ್ತಿದ್ದವರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಕಲ್ಯಾ ಗ್ರಾಮದ ಕುಂಟಾಡಿ ಪ್ರದೇಶದಲ್ಲಿ ದಾಳಿ ನಡೆಸಿದ ಕಾರ್ಕಳ ಗ್ರಾಮಾಂತರ ಪೊಲೀಸರು ಮೂರು ಟಿಪ್ಪರ್ ಹಾಗೂ ಒಂದು ಹಿಟಾಚಿಯನ್ನು ವಶಪಡಿಸಿಕೊಂಡು, ಹರೀಶ್ ಶೆಟ್ಟಿ, ಸಂತೋಷ್ ಶೆಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸೆ.11ರಂದು ಸಿಎಮ್ಎಸ್ ಸ್ಟೋನ್ ಕ್ರಷರ್ಗೆ ದಾಳಿ ನಡೆಸಿ ನಾಲ್ಕು ಟಿಪ್ಪರ್, ಮೂರು ಹಿಟಾಚಿ, ಒಂದು ಕ್ರಷರ್ ಯೂನಿಟ್ ಹಾಗೂ ಸುಮಾರು 20 ಲೋಡ್ ಜೆಲ್ಲಿ ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕ್ರಷರ್ ಪರವಾನಗಿ ಹಲವು ವರ್ಷಗಳ ಹಿಂದೆಯೇ ಮುಕ್ತಾಯಗೊಂಡಿರುವುದು ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಮೊಹಮ್ಮದ್ ಶಫಿ ಹಾಗೂ ರಂಜಿತ್ ವಿರುದ್ಧ ಪ್ರಕರಣ ದಾಖಲಾಗಿದೆ.
ಇದೇ ವೇಳೆ ಸಾಂತೂರಿನಲ್ಲಿ ಪಡುಬಿದ್ರಿ ಪೊಲೀಸರು ದಾಳಿ ನಡೆಸಿ ಸುಮಾರು 40 ಯುನಿಟ್ ಜೆಲ್ಲಿ, ಎರಡು ಲಾರಿ ಹಾಗೂ ಒಂದು ಜೆಸಿಬಿ ವಶಪಡಿಸಿಕೊಂಡಿದ್ದು, ಪ್ರಭಾಕರ ಶೆಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.






