ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ ಗ್ರಾಮದ ಇತಿಹಾಸ ಪ್ರಸಿದ್ಧ ಪ್ರವಾಸೋದ್ಯಮದ ಪ್ರವಾಸಿ ತಾಣ ಎಂದೆ ಪ್ರಖ್ಯಾತಿ ಪಡೆದ ಪ್ರವಾಸಿಗರ ಪ್ರಮುಖ ಆಕರ್ಷಣೆಯಾದ ತ್ರಾಸಿ ಬೀಚ್ನ ಸಾರ್ವಜನಿಕ ಶೌಚಾಲಯದ ಪೈಪ್ಲೈನ್ ಒಡೆದು ಮಲಮೂತ್ರ ಸೋರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ದಿನನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸಿ ಮೋಜು ಮಸ್ತಿ ಮಾಡುವ ಸ್ಥಳ ಇದಾಗಿದ್ದು ಇತ್ತೀಚಿನ ದಿನಗಳಲ್ಲಿ ಸರಕಾರದಿಂದ ಕೋಟಿಗಟ್ಟಲೆ ಹಣ ಬಿಡುಗಡೆಯಾಗಿ ತ್ರಾಸಿ ಬೀಚ್ ನಲ್ಲಿ ಅಭಿವೃದ್ಧಿಯ ಕಾಮಗಾರಿ ನಿರ್ಮಾಣದ ಹಂತದಲ್ಲಿದೆ.
ಸರಕಾರ ಹಾಗೂ ಬೈಂದೂರು ಶಾಸಕ ಗುರುರಾಜ್ ಗಂಟೆ ಹೊಳೆ ಯವರು ಸ್ವಚ್ಛತೆಗಾಗಿ ಸಾಕಷ್ಟು ಪ್ರಯತ್ನದ ಜೊತೆಗೆ ಯೋಜನೆಗಳು ರೂಪಿಸುತ್ತಿದ್ದು ಇಲ್ಲಿ ಮಾತ್ರ ಅಧಿಕಾರಿಗಳು ಯಾರೇ ಎನ್ನದೆ ದಿನ ಕಳೆಯುತ್ತಿದ್ದಾರೆ ಎಂದು ಪ್ರಜ್ಞಾವಂತ ನಾಗರಿಕರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಶೌಚಾಲಯದಿಂದ ಹೊರಹೊಮ್ಮುತ್ತಿರುವ ಮಲಮೂತ್ರ ನೀರು ಸುತ್ತಮುತ್ತ ಹರಿದು ದುರ್ವಾಸನೆ ವ್ಯಾಪಿಸಿದ್ದು, ಬೀಚ್ಗೆ ಭೇಟಿ ನೀಡುವ ಪ್ರವಾಸಿಗರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಚ್ಛತೆ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ಮಹತ್ವದ ಸ್ಥಳವಾಗಿರುವ ತ್ರಾಸಿ ಬೀಚ್ನಲ್ಲಿ ಇಂತಹ ಅವ್ಯವಸ್ಥೆ ಕಂಡುಬಂದಿರುವುದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಗೆ ಸಂಬಂಧಿಸಿದಂತೆ ಅಗತ್ಯ ನಿರ್ವಹಣೆ ಹಾಗೂ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದೇ ಕಾರಣ ಎಂದು ಪ್ರಜ್ಞಾವಂತ ನಾಗರಿಕರು ಆರೋಪಿಸಿದ್ದಾರೆ. ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ಉಂಟುಮಾಡುವ ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಿ, ಶೌಚಾಲಯ ವ್ಯವಸ್ಥೆಯನ್ನು ಸುಧಾರಿಸಬೇಕೆಂದು ಸ್ಥಳೀಯರು ಹಾಗೂ ಪ್ರವಾಸಿಗರು ಆಗ್ರಹಿಸಿದ್ದಾರೆ.




