Home Karavali Karnataka ಹೆಬ್ರಿಯಲ್ಲಿ ಗೋಪಾಲ ಭಂಡಾರಿ ಪುತ್ತಳಿ ನಿರ್ಮಾಣ…!!

ಹೆಬ್ರಿಯಲ್ಲಿ ಗೋಪಾಲ ಭಂಡಾರಿ ಪುತ್ತಳಿ ನಿರ್ಮಾಣ…!!

ಹೆಬ್ರಿ : ಅಜಾತಶತ್ರು ಜನನಾಯಕ ಬಡವರ ಆಶಾಕಿರಣವಾಗಿದ್ದ ಕಾರ್ಕಳ ಕ್ಷೇತ್ರದ ಶಾಸಕರಾಗಿದ್ದ ಹೆಬ್ರಿ ಗೋಪಾಲ ಭಂಡಾರಿ ಅವರ ಶಿಲಾ ಪುತ್ಥಳಿ ಪ್ರತಿಷ್ಠಾಪನೆ, ಸಂಸ್ಮರಣ ಗ್ರಂಥ ಮತ್ತು ಅವರ ಹೆಸರಿನಲ್ಲಿ ಜನಸೇವೆ ಮಾಡಲು ಟ್ರಸ್ಟ್ ರಚನೆ ಮಾಡುವ ಸಮಾಲೋಚನಾ ಸಭೆಯು ಗೋಪಾಲ ಭಂಡಾರಿ ಅಭಿಮಾನಿಗಳ ವೇದಿಕೆಯ ವತಿಯಿಂದ ಹೆಬ್ರಿ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿಗಳ ವೇದಿಕೆಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ ಹೆಬ್ರಿ ಮತ್ತು ಕಾರ್ಕಳ ಕ್ಷೇತ್ರಕ್ಕೆ ಹಲವಾರು ಶಾಶ್ವತ ಕೊಡುಗೆ ನೀಡಿದ ಗೋಪಾಲ ಭಂಡಾರಿ ಅವರ ಹೆಸರು ಶಾಶ್ವತವಾಗಿ ಜನಮಾನಸದಲ್ಲಿ ಉಳಿಯಬೇಕು, ಒಳ್ಳೇಯ ಕೆಲಸ ಮಾಡಿದಾಗ ಕಾಲದ ನಂತರವೂ ಸ್ಮರಿಸುತ್ತಾರೆ ಎಂಬ ಸಂದೇಶ ಸಮಾಜಕ್ಕೆ ಹೋಗಬೇಕು ಎಂದರು. ಅಭಿಮಾನಿಗಳು ದೇಣಿಗೆ ನೀಡಿ ಸಹಕರಿಸುವಂತೆ ನೀರೆ ಕೃಷ್ಣ ಶೆಟ್ಟಿ ಕೋರಿದರು.

ವಕೀಲ ಎಚ್. ಶೇಖರ ಮಡಿವಾಳ್ ಮಾತನಾಡಿ ಗೋಪಾಲ ಭಂಡಾರಿ ಪುತ್ಥಳಿ ಪ್ರತಿಷ್ಠಾಪನೆ ಅತ್ಯುತ್ತಮ ಶ್ಲಾಘನೀಯ ಕಾರ್ಯ ಎಂದರು.

ಮುಖಂಡರಾದ ಮುನಿಯಾಲು ಗೋಪಿನಾಥ್ ಭಟ್, ಕಿರಣ್ ಹೆಗ್ಡೆ ಕಾರ್ಕಳ, ಮುನಿಯಾಲು ಆನಂದ ಪೂಜಾರಿ, ಅಣ್ಣಪ್ಪ ಕುಲಾಲ್ ಮಂಡಾಡಿಜಡ್ಡು, ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ ಮಾತನಾಡಿದರು.

ಹೆಬ್ರಿ ಕಾರ್ಕಳ ರಾಜ್ಯ ಹೆದ್ದಾರಿಯ ತಾಣ ಅರ್ಧನಾರೀಶ್ವರ ದೇವಸ್ಥಾನದ ಎದುರಿನ ವೃತ್ತ ದಲ್ಲಿ ಶಿಲಾ ಪುತ್ಥಳಿ ಪ್ರತಿಷ್ಠಾಪನೆ ಮಾಡುವುದು ಎಂದು ನಿರ್ಧರಿಸಲಾಯಿತು. ಸಂಸ್ಮರಣಾ ಗ್ರಂಥ ರಚನೆಗೆ ಸಮಿತಿಯನ್ನು ರಚಿಸಲಾಯಿತು. ಕಾರ್ಕಳ ಇಂಟಕ್ ಅಧ್ಯಕ್ಷ ಕಿರಣ್ ಹೆಗ್ಡೆ ಕಾರ್ಕಳ 10 ಸಾವಿರ ರೂಪಾಯಿ, ಹೆಬ್ರಿ ಮಂಡಾಡಿಜಡ್ಡು ಅಣ್ಣಪ್ಪ ಕುಲಾಲ್ 10 ಸಾವಿರ ರೂಪಾಯಿ ಹಾಗೂ ಹೆಬ್ರಿ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ 50 ಸಾವಿರ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದರು.

ಚಾರ ಗ್ರಾಮ ಪಂಚಾಯತಿ ಅಧ್ಯಕ್ಷ ದಿನೇಶ ಶೆಟ್ಟಿ, ವಿವಿಧ ಪ್ರಮುಖರಾದ ಸೀತಾನದಿ ರಮೇಶ ಹೆಗ್ಡೆ, ಹೆಬ್ರಿ ಶೀನ ಪೂಜಾರಿ, ಹೆಬ್ರಿ ವಾದಿರಾಜ ಶೆಟ್ಟಿ, ಕಾರ್ಕಳ ಸುಧಾಕರ ಕೋಟ್ಯಾನ್, ಜಾರ್ಜ್ ಕ್ಯಾಸ್ಟಲಿನೋ ನಕ್ರೆ, ಎಳ್ಳಾರೆ ರಾಘವ ದೇವಾಡಿಗ,ಕಾರ್ಕಳ ಭಾನು ಭಾಸ್ಕರ್, ಗೋಪಾಲ ಭಂಡಾರಿ ಅವರ ಸಹೋದರ ರಾಜೇಶ ಭಂಡಾರಿ, ಪುತ್ರ ಪ್ರದೀಪ್ ಭಂಡಾರಿ ಸಹಿತ ಹಲವಾರು ಮಂದಿ ಅಭಿಮಾನಿಗಳು ಭಾಗವಹಿಸಿದ್ದರು.

ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯ ಎಚ್. ಜನಾರ್ಧನ್ ನಿರೂಪಿಸಿದರು. ಮುಖಂಡ ನವೀನ್ ಕೆ. ಅಡ್ಯಂತಾಯ ಸ್ವಾಗತಿಸಿದರು.