ಕಾರ್ಕಳ: ಚೈತನ್ಯ ಕಲಾವಿದರು ಬೈಲೂರು ತಂಡದ ವತಿಯಿಂದ ‘ಅಷ್ಟಮಿ’ ನಾಟಕದ ಶತ ಸಂಭ್ರಮ ಕಾರ್ಯಕ್ರಮ ಏ.20ರ ಸಂಜೆ 5 ಗಂಟೆಗೆ ಬೈಲೂರು ಬಸ್ ಸ್ಟ್ಯಾಂಡ್ ಹತ್ತಿರ ಸೌಂದರ್ಯ ಕಾಂಪ್ಲೆಕ್ಸ್ ಬಳಿ ಜರಗಲಿದೆ ಎಂದು ತಂಡದ ಪ್ರವರ್ತಕ ಪ್ರಸನ್ನ ಶೆಟ್ಟಿ ಬೈಲೂರು ತಿಳಿಸಿದ್ದಾರೆ.
ಅವರು ಕಾರ್ಕಳ ಪ್ರಕಾಶ್ ಹೋಟೆಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ತನ್ನ ರಚನೆ, ನಿರ್ದೇಶನದಲ್ಲಿ ಇದು 10ನೇ ನಾಟಕವಾಗಿದ್ದು, ಅತೀ ಕಡಿಮೆ ಅವಧಿಯಲ್ಲಿ ಅಷ್ಟಮಿ ನಾಟಕ 100 ಪ್ರದರ್ಶನವನ್ನು ಪೂರೈಸಿದ್ದು, 115ನೇ ಪ್ರದರ್ಶನವರೆಗೂ ಬುಕ್ಕಿಂಗ್ ಪಡೆದುಕೊಂಡಿದೆ. ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು, ಮುಂಬಯಿನಲ್ಲಿಯೂ ನಾಟಕ ಪ್ರದರ್ಶನಕ್ಕೆ ಬೇಡಿಕೆ ಬರುತ್ತಿದೆ. ಸ್ಥಳೀಯವಾಗಿ ನಮ್ಮೂರಿನ ಪ್ರತಿಭೆಗಳನ್ನು ಪ್ರೋತ್ಸಾಹಿಸಲು 10 ವರ್ಷದ ಹಿಂದೆ ಬೈಲೂರಿನಲ್ಲಿ ‘ಚೈತನ್ಯ ಕಲಾವಿದರು’ ತಂಡ ರೂಪಿಸಲಾಯಿತು. ಈ ತಂಡದ ಸದಸ್ಯರ ಮೂಲಕ ತುಳುನಾಡಿನ ಜಾನಪದ ಹುಲಿವೇಷದ ಸುತ್ತ ಕಥೆ ಬರೆದು ‘ಅಷ್ಟಮಿ’ ನಾಟಕ ಕಟ್ಟಿಕೊಡಲಾಗಿದೆ. ಅಭಿನಯ ಮತ್ತು ತಂತ್ರಜ್ಞರನ್ನು ಕೂಡಿಕೊಂಡ 25ಕ್ಕೂ ಅಧಿಕ ಮಂದಿ ಸದಸ್ಯರ ತಂಡ ಈ ನಾಟಕದ ಯಶಸ್ಸಿಗೆ ಮುಖ್ಯ ಭಾಗವಾಗಿದ್ದಾರೆ. ಉಡುಪಿ, ದ.ಕ. ಜಿಲ್ಲೆ ಸಹಿತ ಎಲ್ಲೆಡೆ ಉತ್ತಮ ಅಭಿಪ್ರಾಯ ಪಡೆದು ಈ ನಾಟಕವು ಶತ ಪ್ರದರ್ಶನ ಪೂರೈಸಿದೆ. ಈ ಸಂಭ್ರಮಾಚರಣೆಯನ್ನು ಬೈಲೂರಿನಲ್ಲಿ ಆಚರಿಸಲಾಗುತ್ತಿದೆ ಎಂದರು. ಕಾರ್ಯಕ್ರಮದ ಪ್ರಯುಕ್ತ ಕೌಂಟರ್ ಕಾಮಿಡಿ, ನೃತ್ಯ ಸಿಂಚನ, ಸ್ವರ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಲಾ ಪೋಷಕರಾದ ಕೃಷ್ಣರಾಜ ಹೆಗ್ಡೆ, ದಿನೇಶ್ ಬನಾನ್ ನಕ್ರೆ, ಸದಾನಂದ ಸಾಲ್ಯಾನ್, ಸುಮಿತ್ ಶೆಟ್ಟಿ ಬೈಲೂರು ಉಪಸ್ಥಿತರಿದ್ದರು.
